ವಿಜಯಸಾಕ್ಷಿ ಸುದ್ದಿ, ಗದಗ: ಕಲ್ಯಾಣ ಕ್ರಾಂತಿಯ ನಂತರ ಶರಣರಿಂದ ದೊರೆತ ತಾಳೆಗರಿ, ಹಸ್ತಪ್ರತಿ ಕಟ್ಟುಗಳು ತಲೆತಲಾಂತರದಿಂದ ಪೂಜೆಗೊಳ್ಳುತ್ತಿದ್ದವು. ಇಂತಹ ಅಮೂಲ್ಯ ವಚನಗಳ ಕಟ್ಟುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಮುದ್ರಿಸಿ ವಚನ ಸಾಹಿತ್ಯ ಬೆಳಕನ್ನು ಮನೆ-ಮನಗಳಿಗೆ ಪಸರಿಸಿದ ಕೀರ್ತಿ ಫ.ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಶರಣ ಸಂಸ್ಕೃತಿ ಚಿಂತಕರಾದ ಗೌರಕ್ಕ ಬಡಿಗಣ್ಣವರ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಚನ ಸಂಶೋಧನೆಯ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಅಮೂಲ್ಯವಾದ ವಚನಗಳನ್ನು ಮುದ್ರಿಸಲು ಯಾರೂ ಮುಂದೆ ಬರದೇ ಹೋದಾಗ ತಮ್ಮ ಮನೆಯನ್ನೇ ಮಾರಿ `ಹಿತಚಿಂತಕ ಮುದ್ರಣಾಲಯ’ ಸ್ಥಾಪಿಸಿ ವಚನ ಸಂಪುಟಗಳನ್ನು ಹೊರತಂದರು. ಇವರ ಮೂಲಕ 250ಕ್ಕೂ ಹೆಚ್ಚು ವಚನಕಾರರು ಬೆಳಕಿಗೆ ಬಂದರು. 150ಕ್ಕೂ ಹೆಚ್ಚು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.
ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜದ ಅಭಿವೃದ್ಧಿಗಾಗಿ ದುಡಿದ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅನ್ನದಾನಿ ಹಿರೇಮಠ, ಯಲ್ಲಪ್ಪ ಹಂದ್ರಾಳ, ಬಸವರಾಜ ವಾರಿ, ರಾಜಶೇಖರ ಕರಡಿ, ವೀಣಾ ತಡಸದ, ಸುರೇಶ ಕುಂಬಾರ, ರತ್ನಕ್ಕ ಪಾಟೀಲ, ಬಿ.ಎಸ್. ಹಿಂಡಿ, ಎಂ.ಎಫ್. ಡೋಣಿ, ಲಿಂಗರಾಜ ಪಾಟೀಲ, ಅಶೋಕ ಹಾದಿ, ಜಿ.ಎ. ಪಾಟೀಲ, ಚನ್ನಬಸಪ್ಪ ಅಂಗಡಿ, ಸಿ.ಎಂ. ಮಾರನಬಸರಿ, ಶಶಿಕಾಂತ ಕೊರ್ಲಹಳ್ಳಿ, ಸುರೇಶ ಅಂಗಡಿ, ಎಚ್.ಡಿ. ಕುರಿ, ಶೇಖರಪ್ಪ ಕಳಸಾಪೂರಶೆಟ್ರ, ಶಕುಂತಲಾ ಗಿಡ್ನಂದಿ, ಬೂದಪ್ಪ ಅಂಗಡಿ, ಶಾಂತಲಾ ಹಂಚಿನಾಳ, ರತ್ನಾ ಪುರಂತರ, ರಾಜೇಶ್ವರ ಬಡ್ನಿ, ಉಮಾದೇವಿ ಕಣವಿ, ಪಾರ್ವತಿ ಮುಗಳಿ ಮೊದಲಾದವರು ಹಾಜರಿದ್ದರು.
ಡಾ. ಫ.ಗು. ಹಳಕಟ್ಟಿಯರವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಗೌರವ ಕಾರ್ಯದರ್ಶಿ ಡಾ. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ನಾಯಕ ಕಾರ್ಯಕ್ರಮ ನಿರೂಪಿಸಿದರು. ರಾಹುಲ ಗಿಡ್ನಂದಿ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಿವಲೀಲಾ ಅಕ್ಕಿ, ಜಾಗತಿಕ ಸಾಹಿತ್ಯಕ್ಕೆ ವಚನ ಸಾಹಿತ್ಯ ಕನ್ನಡದ ಕೊಡುಗೆಯಾಗಿದೆ. ಇಲ್ಲಿರುವ ವಿಚಾರಗಳನ್ನು ಅರಿತು ಆಚರಿಸಿದರೆ ಜೀವನ ಪಾವನವಾಗುತ್ತದೆ. ಹಳಕಟ್ಟಿ ಶರಣರು ತಮ್ಮ ಜೀವನವನ್ನೇ ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರಕ್ಕೆ ಮುಡಿಪಾಗಿಟ್ಟಿದ್ದರು ಎಂದರು.