ವಿಜಯಸಾಕ್ಷಿ ಸುದ್ದಿ, ಗದಗ : ಮುಂಡರಗಿ ತಾಲೂಕಿನ ಹಾರೋಗೇರಿ ಗ್ರಾಮದ ರೈತ ಮೈಲಾರೆಪ್ಪ ಚೋಳಮ್ಮನವರ ತಮ್ಮ ಒಂದು ಎಕರೆ ಜಮೀನಿನಲ್ಲಿ 2021-22ನೇ ಸಾಲಿನಲ್ಲಿ ಡ್ರ್ಯಾಗನ್ ಫ್ರೂಟ್ ಸಸಿ ನಾಟಿ ಮಾಡಿದ್ದರು. ಆಗ ಡ್ರ್ಯಾಗನ್ ಫ್ರೂಟ್ ಬೆಳೆಯಲು ಮುಂದಾದಾಗ ಕೈ ಹಿಡಿದಿದ್ದು ನರೇಗಾ ಯೋಜನೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಮೂಲಕ ದೊರೆತ ಸಹಾಯಧನದಿಂದ ಒಂದು ಎಕರೆಯಲ್ಲಿ 35 ರೂಪಾಯಿಗೆ ಒಂದರಂತೆ 1700 ಸಸಿಗಳನ್ನು ತಂದು ನೆಟ್ಟಿದ್ದರು. ನೆಟ್ಟ ವರ್ಷ ಹೊರತುಪಡಿಸಿದರೆ ನಂತರದ ಮೂರು ವರ್ಷಗಳಲ್ಲಿ ಕ್ರಮವಾಗಿ 1.50 ಲಕ್ಷ, 2.50 ಲಕ್ಷ ಕೈ ಸೇರಿದೆ.
ಈ ವರ್ಷ ಈಗಾಗಲೇ 2.50 ಲಕ್ಷ ರೂ ಆದಾಯ ಕೈ ಸೇರಿದ್ದು, ಇನ್ನು ಎರಡು ಲಕ್ಷ ರೂಪಾಯಿಗಳ ಆದಾಯದ ನಿರೀಕ್ಷೆಯಲ್ಲಿ ರೈತ ಮೈಲಾರೆಪ್ಪ ಇದ್ದಾರೆ. ಮೈಲಾರೆಪ್ಪನವರ ಮಕ್ಕಳಾದ ಮರುಳಸಿದ್ದಪ್ಪ, ಭರತ, ನಿಂಗರಾಜ ಅವರು ಸಹ ಜಮೀನಿನ ಉಸ್ತುವಾರಿಯಲ್ಲಿದ್ದು, ಪ್ರತಿ ವರ್ಷದ ಮಳೆಗಾಲದ ಸಮಯದಲ್ಲಿ ಲಕ್ಷಗಳ ಲೆಕ್ಕದಲ್ಲಿ ಡ್ರ್ಯಾಗನ್ ಫ್ರೂಟ್ ಫಸಲು ಕಟಾವಿಗೆ ಬರುತ್ತಿರುವುದು ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.
ಡ್ರ್ಯಾಗನ್ ಫ್ರೂಟ್ ಸಸಿಗಳನ್ನು ತಂದು ರೈತ ಮೈಲಾರೆಪ್ಪನವರು ನೆಡುವಾಗ ಈ ಭಾಗಕ್ಕೆ ಅದು ಹೊಸ ಹಣ್ಣು. ಈಗ ಡ್ರ್ಯಾಗನ್ ಫ್ರೂಟ್ ಕಟಾವಿನ ಸಮಯದಲ್ಲಿ ಕೊಂಡುಕೊಳ್ಳಲು ಹಣ್ಣಿನ ವ್ಯಾಪಾರಸ್ಥರು ಮಹಾನಗರಗಳಿಂದ ಹಾರೋಗೇರಿ ಗ್ರಾಮದ ತೋಟಕ್ಕೆ ಬರುತ್ತಿದ್ದಾರೆ. ಇದರಿಂದ ಸಾಗಣೆ ವೆಚ್ಚವೂ ಕಡಿಮೆಯಾಗಿದ್ದು, ಮನೆಯವರೇ ಕಟಾವಿನ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ.
ನರೇಗಾ ಯೋಜನೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಬಹುದಾದ ಮಾಹಿತಿ ಸಿಕ್ಕಿತು. ಈ ಬಗ್ಗೆ ವಿಚಾರಿಸಿದಾಗ ತಾಲೂಕು ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಿದರು. ಇದರಿಂದ ಅನುಕೂಲವಾಗಿದೆ. ಲಕ್ಷದ ಲೆಕ್ಕದಲ್ಲಿ ಆದಾಯ ಕೈಸೇರುತ್ತಿದೆ.
– ಮೈಲಾರೆಪ್ಪ ಚೋಳಮ್ಮನವರ.
ರೈತ.ನರೇಗಾ ಯೋಜನೆಯ ಮೂಲಕ ಡ್ರ್ಯಾಗನ್ ಫ್ರೂಟ್ ಬೆಳೆದು ರೈತ ಮೈಲಾರೆಪ್ಪ ಪ್ರತಿವರ್ಷ ಲಕ್ಷ ಲಕ್ಷ ಆದಾಯ ಗಳಿಸುತ್ತಿರುವುದು ರೈತ ಸ್ವಾವಲಂಬನೆಗೆ ಮಾದರಿಯಾಗಿದೆ. ಇದು ನರೇಗಾ ಯೋಜನೆಯ ಸಮರ್ಪಕ ಸದ್ಬಳಕೆಗೆ ಒಂದು ಉತ್ತಮ ಉದಾಹರಣೆ.
– ವಿಶ್ವನಾಥ ಹೊಸಮನಿ.
ಇಓ, ತಾಪಂ-ಮುಂಡರಗಿ.