ಕೋಚಲಾಪುರದಲ್ಲಿ ಶ್ರೀ ಧ.ಗ್ರಾ ಯೋಜನೆಯಿಂದ ನಿರ್ಗತಿಕಗಳಿಗೆ ವಾತ್ಸಲ್ಯ ಮನೆ ಹಸ್ತಾಂತರ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕೋಚಲಾಪುರ ಗ್ರಾಮದಲ್ಲಿ ನಿರ್ಗತಿಕಳಾದ ಲಕ್ಷ್ಮವ್ವ ಮುಂಡರಗಿಯವರಿಗೆ ಶ್ರೀ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸುವ ಕಾರ್ಯಕ್ರಮ ಜರುಗಿತು.

Advertisement

ನರೇಗಲ್ಲ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಧರ್ಮಪತ್ನಿ ಡಾ.ಹೇಮಾವತಿ ಹೆಗ್ಗಡೆಯವರು ಎಂದಿಗೂ ಭಕ್ತರ ಅಭಿವೃದ್ಧಿಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಗ್ರಾಮೀಣಾಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಅವರು ಮಹಿಳೆಯರ ಸ್ವಾವಲಂಬಿ ಬದುಕಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಇದರೊಂದಿಗೆ ನಿರ್ಗತಿಕರಿಗೆ ಮನೆ ಕಟ್ಟಿಕೊಡುವ ಅವರ ಯೋಜನೆ ಶ್ರೇಷ್ಠವಾದ ಸಾಮಾಜಿಕ ಕಾರ್ಯವಾಗಿದೆ ಎಂದರು.

ಜಿಲ್ಲಾ ಯೋಜನಾಧಿಕಾರಿ ಯೋಗೇಶ ಎ ಮಾತನಾಡಿ, ಸಂಸ್ಥೆಯ ವತಿಯಿಂದ ನಿರ್ಗಕತಿಕರಿಗೆ ಪ್ರತಿ ತಿಂಗಳೂ 1000ರೂ.ಗಳ ಮಾಸಾಶನ ನೀಡಲಾಗುತ್ತಿದೆ. ರೋಣ ತಾಲೂಕಿನಲ್ಲಿ 97 ಜನ ಈ ಮಾಸಾಶನ ಪಡೆಯುತ್ತಿದ್ದಾರೆ. ನಿರ್ಗತಿಕರಿಗೆ 10*10 ಅಳತೆಯಲ್ಲಿ ಮನೆ ನಿರ್ಮಿಸಿಕೊಡಲಾಗುತ್ತಿದೆ. ಈ ಮನೆಗೆ ಒಟ್ಟು 1.14ಲ ರೂ. ಖರ್ಚಾಗಿದೆ. ರೋಣ ತಾಲೂಕಿನಲ್ಲಿ ಇಂತಹ 7 ಮನೆಗಳನ್ನು ನಿರ್ಮಿಸಿದ್ದು, ರಾಜ್ಯದಲ್ಲಿ 389 ಮನೆಗಳನ್ನು ಸಂಸ್ಥೆಯಿಂದ ನಿರ್ಮಿಸಲಾಗಿದೆ. 150 ಮನೆಗಳನ್ನು ದುರಸ್ತಿ ಮಾಡಲಾಗಿದೆ. ರಾಜ್ಯದಲ್ಲಿ 31325 ವಿಶೇಷ ಚೇತನರಿಗೆ ಒಟ್ಟು 8 ಕೋಟಿ ರೂ.ಗಳ ಸಹಾಯ ಧನವನ್ನು ನೀಡಲಾಗಿದ್ದು, ಅದರಲ್ಲಿ ರೋಣ ತಾಲೂಕಿನಲ್ಲಿ 85 ಜನರು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ.ಪಂ. ಸದಸ್ಯ ರಾಚಯ್ಯ ಮಾಲಗಿತ್ತಿಮಠ ಮಾತನಾಡಿ, ಇಂದು ಹಸ್ತಾಂತರಿಸಲಾದ ಮನೆಗೆ ಬೇಕಾದ ವಿದ್ಯುತ್ ಮತ್ತು ನೀರಿನ ವ್ಯವಸ್ಥೆಯನ್ನು ಪ.ಪಂ ವತಿಯಿಂದ ಬೇಗನೆ ಒದಗಿಸಿಕೊಡುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಶರಣಪ್ಪಗೌಡ ಅಯ್ಯನಗೌಡ್ರ, ಯೋಜನಾಧಿಕಾರಿ ಸುಧಾ ಗಾಂವಕರ ಮತ್ತು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು. ತಾಲೂಕಾ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ ನಿರೂಪಿಸಿ ಸ್ವಾಗತಿಸಿದರು. ಕಾರ್ಯಕರ್ತೆ ಅಶ್ವಿನಿ ವಂದಿಸಿದರು.

ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಮಾತನಾಡಿ, ಒಳ್ಳೆಯ ಕಾರ್ಯ ಮಾಡಲು ಪುಣ್ಯ ವಿಶೇಷ ಬೇಕಾಗುತ್ತದೆ. ಈ ಸಂಸ್ಥೆಯು ಅಂತಹ ವಿಶೇಷತೆಯನ್ನು ಹೊಂದಿದ್ದು, ಇಂದು ಅರ್ಹರಿಗೆ ವಾತ್ಸಲ್ಯ ಮನೆಯನ್ನು ಹಸ್ತಾಂತರಿಸುತ್ತಿದೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವದರಲ್ಲಿ ಈ ಸಂಸ್ಥೆಯ ಪಾತ್ರ ಮಹತ್ವದ್ದು ಎಂದರು.


Spread the love

LEAVE A REPLY

Please enter your comment!
Please enter your name here