ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದಲ್ಲಿ ರವಿವಾರ ಬೆಳಕು ಹರಿಯುತ್ತಿದ್ದಂತೆ ಎಲ್ಲರ ಕಿವಿಗಳಲ್ಲಿ ಹನುಮಾನ್ ಚಾಲೀಸಾ ಮಂತ್ರವೇ ಕೇಳಿಬರುತ್ತಿತ್ತು. ಅದು ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಹೆಬ್ಬಳ್ಳಿಯ ಶ್ರೀ ದತ್ತಾವಧೂತ ಮಹಾರಾಜರು ಹನುಮಾನ ಚಾಲೀಸಾ ಪಠಣೆಗೆ ಚಾಲನೆ ನೀಡಿದ ಅಪೂರ್ವ ಘಳಿಗೆಯಾಗಿತ್ತು.
ಬೆಳಿಗ್ಗೆ 7 ಕ್ಕೆ ಸರಿಯಾಗಿ ಪ್ರಾರಂಭವಾದ ಹನುಮಾನ್ ಚಾಲೀಸಾ ಪಠಣ ರಾತ್ರಿ 8ರವರೆಗೂ ಅವ್ಯಾಹತವಾಗಿ 13 ತಾಸುಗಳ ಕಾಲ ಜರುಗಿ ಪಟ್ಟಣದ ಮತ್ತು ಸುತ್ತಲಿನ ಎಲ್ಲ ಗ್ರಾಮಗಳ ಭಕ್ತರಿಗೆ ಅತ್ಯಾನಂದವನ್ನು ನೀಡಿತು. ಹೊತ್ತು ಏರುತ್ತಿದ್ದಂತೆ ಗದಗ, ಕೋಟುಮಚಗಿ, ಜಕ್ಕಲಿ, ಅಬ್ಬಿಗೇರಿ, ಮಾರನಬಸರಿ, ನಿಡಗುಂದಿ, ಗಜೇಂದ್ರಗಡ, ರೋಣ, ನರಗುಂದ, ಮುಂಡರಗಿ, ಲಕ್ಕುಂಡಿ ಅಷ್ಟೇ ಅಲ್ಲದೆ ದೂರದ ಹುಬ್ಬಳ್ಳಿ-ಧಾರವಾಡ, ನೆರೆಯ ಕೊಪ್ಪಳ, ಯಲಬುರ್ಗಿ, ಕುಕನೂರು ಮುಂತಾದಡೆಗಳಿAದ ಭಕ್ತ ಸಾಗರವೇ ಹರಿದು ಬಂದಿತು.
ಬೆಳಿಗ್ಗೆ 9.30ರ ಹೊತ್ತಿಗೆ ದೇವಸ್ಥಾನದ ಆವರಣವೆಲ್ಲ ತುಂಬಿ ಹೋಗಿ ಹನುಮಾನ್ ಚಾಲೀಸಾ ಪಠಣೆಯ ಘೋಷವು ಮುಗಿಲು ಮುಟ್ಟಿತ್ತು. ಇದನ್ನು ಪಠಣೆ ಮಾಡುವಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಒಂದು ಪೈಪೋಟಿಯೇ ನಡೆದು ಹನುಮಾನ್ ಚಾಲೀಸಾದ ಭಕ್ತಿಯ ಪರಾಕಾಷ್ಠೆಯನ್ನು ತೋರಿಸಿತ್ತು.
ರಾತ್ರಿ 7.30ರ ಹೊತ್ತಿಗೆ ಇನ್ನೇನು ಹನುಮಾನ್ ಚಾಲೀಸಾ ಪಠಣೆ ಮುಕ್ತಾಯಕ್ಕೆ ಬಂದಿತು ಎನ್ನುವಷ್ಟರಲ್ಲಿ ಎಲ್ಲರೂ ವೃತ್ತಾಕಾರದಲ್ಲಿ ನಿಂತು ಕುಣಿಯುತ್ತ ಹನುಮಾನ್ ಚಾಲೀಸಾ ಪಠಣೆಯನ್ನು ಮಾಡತೊಡಗಿದರು. ಹನುಮಂತನ ಆಯುಧವಾದ ಗದೆಯನ್ನು ಹಿಡಿದುಕೊಂಡು ನೃತ್ಯ ಮಾಡುತ್ತ ಹೇಳುತ್ತಿದ್ದ ಹನುಮಾನ್ ಚಾಲೀಸಾ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು. ಪುರುಷರು, ಮಹಿಳೆಯರು ಈ ಸಮಯದಲ್ಲಿ ಬಗಾಟಬುಗುರಿ ಆಡಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪಲ್ಲವಿ ಗ್ರಾಮಪುರೋಹಿತ ಪ್ರಾರ್ಥಿಸಿದರು. ಡಾ. ಕೃಷ್ಣಾ ಜಿ. ಕಾಳೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅರುಣ ಬಿ.ಕುಲಕರ್ಣಿ ನಿರೂಪಿಸಿದರೆ, ರಮೇಶ ಕುಲಕರ್ಣಿ ವಂದಿಸಿದರು.
ಭಕ್ತರ ಈ ಸಡಗರ-ಸಂಭ್ರಮವನ್ನು ಕಂಡ ವ್ಯವಸ್ಥಾಪಕರೆಲ್ಲರೂ ಭಾವುಕರಾಗಿದ್ದರು. ತಾವು ಅದೆಂತಹ ಮಹತ್ಕಾರ್ಯವನ್ನು ನೆರವೇರಿಸಿದೆವು ಎನ್ನುವ ಧನ್ಯತಾ ಭಾವ ಅವರಲ್ಲಿತ್ತು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ. ಜಿ.ಕೆ. ಕಾಳೆ, ಕಾರ್ಯಾಧ್ಯಕ್ಷ ಶ್ರೀಪಾದಭಟ್ಟ ಜೋಷಿ, ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ, ಉಪಾಧ್ಯಕ್ಷ ಆದರ್ಶ ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಆರ್.ಡಿ. ಕುಲಕರ್ಣಿ, ಗುರುರಾಜ ಕುಲಕರ್ಣಿ, ಆನಂದ ಕುಲಕರ್ಣಿ, ವಿಶ್ವನಾಥ ಗ್ರಾಮಪುರೋಹಿತ, ಅನಸೂಯಾ ಮಹಿಳಾ ಮಂಡಳಿಯ ಸದಸ್ಯರ ಕಣ್ಣಾಲಿಗಳು ತುಂಬಿದ್ದವು.