ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ರಾಮಾಯಣದಲ್ಲಿ ರಾಮ, ಸೀತೆ, ಲಕ್ಷö್ಮಣ ಮತ್ತಿತರ ಪಾತ್ರಗಳು ಹೇಗೆ ಮುಖ್ಯವಾಗಿವೆಯೋ ಹನುಮಂತನೂ ಸಹ ಅಷ್ಟೇ ಮುಖ್ಯ ಪಾತ್ರಧಾರಿಯಾಗಿದ್ದಾನೆ. ಹನುಮಂತನಿಲ್ಲದೆ ರಾಮಾಯಣವು ಅಪೂರ್ಣ ಎನ್ನಿಸಿಕೊಳ್ಳುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಹೇಳಿದರು.
ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಗುರುವಾರ ನಡೆದ ಹನುಮಾನ ಚಾಲೀಸಾ ಪಠಣದ ಅಭ್ಯಾಸ ವರ್ಗದಲ್ಲಿ ಅವರು ಮಾತನಾಡಿದರು.
ರಾವಣ ಸೀತಾಮಾತೆಯನ್ನು ಕದ್ದೊಯ್ದಾಗ ಅವನು ಸೀತೆಯನ್ನು ಎಲ್ಲಿರಿಸಿದ್ದಾನೆ ಎಂಬುದನ್ನು ಹುಡುಕಲು ಸಹಾಯ ಮಾಡಿ ಯಶಸ್ವಿಯಾದವ ಹನುಮಂತ. ಸಾಗರೋಲ್ಲಂಘನ ಮಾಡುವ ಮೂಲಕ ಆತ ಲಂಕೆಗೆ ತೆರಳಿ ಅಶೋಕ ವನದಲ್ಲಿ ಸೀತಾಮಾತೆಯನ್ನು ಹುಡುಕಿದ. ಆಕೆಗೆ ರಾಮಮುದ್ರೆಯ ಉಂಗುರವನ್ನು ತೋರಿಸಿ ತನ್ನ ಪರಿಚಯ ಹೇಳಿಕೊಂಡ ಹನುಮಂತ ಲಂಕೆಯ ಜನತೆಗೆ, ಅಲ್ಲಿನ ರಾಜ ರಾವಣನಿಗೆ ತಾನೆಷ್ಟು ಕುಶಾಗ್ರಮತಿ ಎಂಬುದನ್ನು ತೋರಿಸಿದ.
ಪ್ರತಿ ವಾರವೂ ಇಲ್ಲಿ ಹನುಮಾನ ಚಾಲೀಸಾ ಪಠಣದ ಅಭ್ಯಾಸ ವರ್ಗವು ನಡೆಯುತ್ತಿದ್ದು, ಈ ಮೂಲಕ ನಮ್ಮಲ್ಲಿ ಶಕ್ತಿ, ಯುಕ್ತಿಯನ್ನು ಬೆಳೆಸಿಕೊಳ್ಳಲು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕುಲಕರ್ಣಿ ಹೇಳಿದರು.
ಈ ಸಂದರ್ಭದಲ್ಲಿ ಶೇಷಗಿರಿ ಕುಲಕರ್ಣಿ, ಎಸ್.ಎಚ್. ಕುಲಕರ್ಣಿ, ಅಜಿತ ಕುಲಕರ್ಣಿ, ಸುಶೀಲಾ ಪುರಾಣಿಕ, ರೂಪಾ ಗ್ರಾಮಪುರೋಹಿತ, ಲಕ್ಷ್ಮೀ ಗ್ರಾಮಪುರೋಹಿತ, ವಿದ್ಯಾ ಹೆಗಡೆ ಮುಂತಾದವರಿದ್ದರು.