ಬೆಂಗಳೂರು:- ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತೋಷವಾಗುತ್ತಿದೆ ಎಂದು ಕೆ ಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ.
ಮಂತ್ರಿಸ್ಥಾನದಿಂದ ವಜಾಗೊಂಡ ಬೆನ್ನಲ್ಲೇ ಮಾತನಾಡಿದ ಅವರು, ನನ್ನ ವಜಾದ ಹಿಂದೆ ಪಿತೂರಿ ಮತ್ತು ಷಡ್ಯಂತ್ರವಿದೆ. ಏನ್ ಏನ್ ಆಗಿದೆ? ಯಾರು ಹಿಂದೆ ಇದ್ದಾರೆ ಎಲ್ಲಾ ಗೊತ್ತಿದೆ. ಕಾಲ ಬಂದಾಗ ಅದನ್ನು ತಿಳಿಸುತ್ತೇನೆ. ನಾನು ಮಾಜಿಯಾಗಿ ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳಲು ಸಂತೋಷವಾಗುತ್ತಿದೆ. ಮಂತ್ರಿಯಾಗಲು ಸಿದ್ದರಾಮಯ್ಯನವರು ಅವಕಾಶ ಕೊಟ್ಟಿದ್ದರು. ಇಲ್ಲಿಯವರೆಗೆ ಅವಕಾಶ ನೀಡಿದ್ದಕ್ಕೆ ನಾನು ಧನ್ಯವಾದ ತಿಳಿಸಲು ತೆರಳಿದ್ದೆ. ವಜಾಗೊಳಿಸಿದ ನಿರ್ಧಾರ ಪ್ರಕಟವಾದ ನಂತರ ಮುಖ್ಯಮಂತ್ರಿಗಳು ಮಾತನಾಡಬಹುದು ಎಂದು ಭಾವಿಸಿದ್ದೆ. ಅವರು ಪ್ರತಿಕ್ರಿಯೆ ನೀಡಿದ ಬಳಿಕ ನಾನು ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಅವರು ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಈಗ ನಾನೇ ಮಾತನಾಡುತ್ತಿದ್ದೇನೆ ಎಂದರು.
ರಾಹುಲ್ ಗಾಂಧಿ, ವೇಣುಗೋಪಾಲ್ ಅವರಿಗೆ ನನ್ನ ಬಗ್ಗೆ ತಪ್ಪು ಗ್ರಹಿಕೆಯಾಗಿದೆ. ತಪ್ಪು ಗ್ರಹಿಕೆಯನ್ನು ಸರಿಪಡಿಸುವ ಕಾರ್ಯ ಮಾಡಲಿದ್ದೇನೆ. ಹೀಗಾಗಿ ಮನವರಿಕೆ ಮಾಡಿಸಲು ದೆಹಲಿಗೆ ಹೋಗಲಿದ್ದೇನೆ ಎಂದು ತಿಳಿಸಿದರು.



