ವಿಜಯನಗರ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಮೈಲಾರದಲ್ಲಿ ಭರತ್ ಹುಣ್ಣಿಮೆ ನಿಮಿತ್ತ ಆಯೋಜಿಸಲಾಗಿದ್ದ ಈ ವರ್ಷದ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವ ಭಕ್ತಿಸ್ಫೂರ್ತಿಯಿಂದ ನೆರವೇರಿತು.
ಸಾವಿರಾರು ಭಕ್ತರು ಸೇರಿ ಕಾರ್ಣಿಕೋತ್ಸವವನ್ನು ಕಣ್ತುಂಬಿಕೊಂಡರು.
ಕಾರ್ಣಿಕ ನುಡಿ ಹೇಳಿದ ಗೊರವಯ್ಯ ಕೇಳಗೆ ಬಿದ್ದು, “ಅಂಬಲಿ ರಾಶಿಗೆ ಮುತ್ತಿನ ಗಿಣಿ – ಸಮೃದ್ಧಿ ಆಯ್ತಲೆ ಪರಾಕ್” ಎಂಬ ದೈವವಾಣಿಯನ್ನು ಪ್ರಕಟಿಸಿದರು.
ಈ ಕಾರ್ಣಿಕ ನುಡಿ ಮೂಲಕ ಈ ವರ್ಷವೂ ಮಳೆ ಸಮರ್ಪಕವಾಗಿ ಸುರಿಯಲಿದ್ದು, ಬೆಳೆ ಉತ್ತಮವಾಗಿ ಬೆಳೆಯಲಿದೆ ಎಂಬ ಆಶಾವಾದ ಮೂಡಿದೆ. ಕೃಷಿ ಆಧಾರಿತ ಸಮಾಜಕ್ಕೆ ಇದು ಶುಭಸೂಚನೆಯಾಗಿ ಪರಿಗಣಿಸಲಾಗಿದೆ.
ಪ್ರತಿವರ್ಷದಂತೆ ಈ ಬಾರಿಯೂ ದೊಡ್ಡ ಮೈಲಾರ ಕ್ಷೇತ್ರದಲ್ಲಿ ನಡೆದ ಕಾರ್ಣಿಕೋತ್ಸವ ಧಾರ್ಮಿಕ ಸಂಪ್ರದಾಯ, ನಂಬಿಕೆ ಮತ್ತು ಜನಸಾಮಾನ್ಯರ ಬದುಕಿನೊಂದಿಗೆ ಬೆಸೆದುಕೊಂಡ ಮಹತ್ವದ ಘಟನೆಯಾಗಿ ಮೂಡಿ ಬಂದಿದೆ.



