ಬೆಂಗಳೂರು:- ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯ ಕಿರುಕುಳದಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯದ ಶ್ರೀನಗರದಲ್ಲಿ ಜರುಗಿದೆ.ಸೈಟ್ ವಿಚಾರದ ತನಿಖೆ ಹೆಸರಿನಲ್ಲಿ ಪೊಲೀಸ್ ಅಧಿಕಾರಿಯು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಮಹದೇವಯ್ಯ ಮೃತ ದುರ್ದೈವಿ. ಬುಧವಾರ ಸಂಜೆ ಮಹದೇವಯ್ಯ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಮಹದೇವಯ್ಯ ಸಾವಿಗೆ ರಾಜಗೋಪಾಲನಗರ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ಮಹದೇವಯ್ಯ ವಿರುದ್ಧ ಕಳೆದ ಫೆಬ್ರವರಿಯಲ್ಲಿ ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿವಶಂಕರ್ ಎಂಬುವವರು ಮಹದೇವಯ್ಯ ವಿರುದ್ಧ ದೂರು ನೀಡಿದ್ದರು.
ಪ್ರಕರಣ ಸಂಬಂಧ ಮಹದೇವಯ್ಯ ಜಾಮೀನು ಪಡೆದ ಬಳಿಕ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ವೇಳೆ ರಾಜಗೋಪಾಲನಗರ ಠಾಣೆ ಇನ್ಸ್ಪೆಕ್ಟರ್ ಕಿರುಕುಳ ನೀಡಿದ್ದರು. ತನಿಖೆ ಹೆಸರಲ್ಲಿ 15 ದಿನಗಳಿಂದ ಠಾಣೆಗೆ ಕರೆಸಿ ಟಾರ್ಚರ್ ಮಾಡುತ್ತಿದ್ದರು. ಊರುಬಿಟ್ಟು ಹೋಗಿ, ಇಲ್ಲದಿದ್ದರೆ ಹೇಳಿದವರಿಗೆ ಸೈಟ್ ರಿಜಿಸ್ಟರ್ ಮಾಡಿ ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಮಹದೇವಯ್ಯ ಪತ್ನಿ ಆರೋಪಿಸಿದ್ದಾರೆ.