ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ 2020ರಲ್ಲಿ ನಡೆದಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಗಲಭೆ ಸಂಬಂಧ ತಪ್ಪೊಪ್ಪಿಕೊಂಡಿದ್ದ ಮೂವರು ಆರೋಪಿಗಳಿಗೆ ಕಠಿಣ ಶಿಕ್ಷೆ ಜೊತೆಗೆ ದಂಡ ವಿಧಿಸಿ NIA ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಕಠಿಣ ಶಿಕ್ಷೆಗೆ ಒಳಗಾದವರನ್ನು ಸೈದ್ ಇಕ್ರಾಮುದ್ದೀನ್, ಸೈಯದ್ ಆಸೀಫ್, ಮಹಮ್ಮದ್ ಆಸೀಫ್ ಎಂದು ಗುರುತಿಸಲಾಗಿದೆ. 2020 ಆಗಸ್ಟ್ 12ರಂದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದಿದ್ದ ಗಲಭೆ ಸಂಬಂಧ 187 ಆರೋಪಿಗಳನ್ನ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಪ್ರತ್ಯೇಕ ಪ್ರಕರಣ ವಿಚಾರಣೆಯಲ್ಲಿ ಮೂವರು ಅಪರಾಧಿಗಳು ದೋಷಿಗಳೆಂದು ಎನ್ಐಎ ಕೋರ್ಟ್ ತೀರ್ಪು ನೀಡಿದೆ.
ಇನ್ನು ಅಪರಾಧಿಗಳು ನಿಷೇಧಿತ ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರೆಂದು ಎನ್ಐಎ ತಮ್ಮ ವಾದದಲ್ಲಿ ಮಂಡನೆ ಮಾಡಿತ್ತು. ವಾದವನ್ನು ಒಪ್ಪಿದ ನ್ಯಾಯಾಲಯ ಆಪಾದಿತರಿಗೆ ಪಿಎಫ್ಐ ನಂಟಿದೆ ಎಂಬುದನ್ನು ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.