ವಿಜಯಸಾಕ್ಷಿ ಸುದ್ದಿ, ಗದಗ: ಸ್ಪಷ್ಟ-ನಿರ್ದಿಷ್ಟ ಗುರಿ, ಗುರಿ ಸಾಧಿಸುವ ಛಲ, ಕಠಿಣ ಪರಿಶ್ರಮ, ನಿರಂತರ ಅಭ್ಯಾಸ, ಅಚಲವಾದ ಆತ್ಮವಿಶ್ವಾಸ, ಸಮಯದ ಸದ್ಭಳಕೆಯೊಂದಿಗೆ ದೈನಂದಿನ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಅಳವಡಿಸಿಕೊಂಡು ನಿಮ್ಮ ಮೇಲೆಯೇ ನಂಬಿಕೆ ಇಟ್ಟುಕೊಂಡು ಸಾಗಿದರೆ, ಯಶಸ್ಸು ಖಂಡಿತ ಸಾಧ್ಯ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಅವರು ತಾವು ದತ್ತು ಪಡೆದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ತಮ್ಮ ಸುದೀರ್ಘ ಅನುಭವವನ್ನು ಹಂಚಿಕೊಂಡರು.
ಯಶಸ್ಸಿನಡೆಗೆ ವಿದ್ಯಾರ್ಥಿಗಳು ಸಾಗುವಾಗ ಹಲವಾರು ಕಷ್ಟಗಳು ಬಂದರೂ ಎದುರಿಸುವ ಆತ್ಮ ವಿಶ್ವಾಸ ಒಂದಿದ್ದರೆ ಸಾಕು. ಯಶಸ್ಸು ಅಂದರೆ ಗೆಲವು, ಸಾಧನೆ, ನಾವು ಏನನ್ನು ಸಾಧಸಿಬೇಕೆಂದುಕೊಳ್ಳುತ್ತೇವೆಯೋ ಅದನ್ನು ಸಾಧಿಸುವುದೇ ಯಶಸ್ಸು. ಅದು ಅದೃಷ್ಟದಿಂದ, ಮತ್ತೊಬ್ಬರ ನೆರವಿನಿಂದ ಬರುವುದಿಲ್ಲ. ಯಶಸ್ಸಿಗಾಗಿ ನಾವು ಕಾಯದೇ ನಮ್ಮ ಯಶಸ್ಸಿಗೆ ನಾವೇ ದಿಟ್ಟ ಹೆಜ್ಜೆ ಇಡಬೇಕು. ಯಶಸ್ಸು ನಮ್ಮ ಹೋರಾಟದ ಫಲ. ಯಶಸ್ಸನ್ನು ನಾವೇ ಪರಿಶ್ರಮದಿಂದ ಪಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲ ಸಾಗಬೇಕು ಎಂದರು.
ಈ ಸಂದರ್ಭದಲ್ಲಿ ಅವ್ವ ಸೇವಾ ಟ್ರಸ್ಟ್ ನಿರ್ದೇಶಕರಾದ ಹೇಮಲತಾ ಬಸವರಾಜ ಹೊರಟ್ಟಿ, ಡಾ. ಬಸವರಾಜ ಧಾರವಾಡ, ಡಿ.ಡಿ.ಪಿ.ಐ ಆರ್.ಎಸ್. ಬುರಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಂದ್ರ ಶೆಟ್ಟೆಪ್ಪನವರ, ಶಿಕ್ಷಣ ಸಂಯೋಜಕ ಮುರಳಿ ಸೊಲ್ಲಾಪುರ, ಪ್ರಭಾರಿ ಮುಖ್ಯೋಪಾಧ್ಯಾಯರಾದ ಜಯಲಕ್ಷ್ಮಿ ಅಣ್ಣಿಗೇರಿ, ಶಂಕ್ರಮ್ಮ ಆರ್.ಹಣಮಗೌಡ್ರು, ಎಂ.ಐ. ಶಿವನಗೌಡ್ರು, ಮಂಜುಳಾ ಪಿ.ಸಾಮ್ರಾಣಿ, ಸುಮಂಗಲ ಎಂ.ಪತ್ತಾರ್, ಶಾರದಾ ಬಾಣದ, ಶೋಭಾ ಎಸ್.ಗಾಳಿ, ರಮೇಶ್ ಬಸರಿ, ಸಾವಿತ್ರಿ ಎ.ಗದ್ದನಕೇರಿ, ಎನ್.ಆರ್. ಶಿರೋಳ್, ಸಬಿಯಾ ಯು.ಕುಷ್ಟಗಿ, ಗಂಗಾ ಎಂ.ಅಳವಂಡಿ, ಮಂಜುಳಾ ಟಿ, ಶಶಿಕಲಾ ಬಿ.ಗುಳೇದವರ, ಪದ್ಮಾ ವಿ.ದಾಸರ್, ಲಕ್ಷ್ಮಮ್ಮ ಮಾಳೋತ್ತರ್, ಶಾರದಾ ಬಾಣದ ಮುಂತಾದವರು ಉಪಸ್ಥಿತರಿದ್ದರು. ಸಂಜೀವಿನಿ ಕೂಲಗುಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಜಗತ್ತಿನಲ್ಲಿ ಬಹುತೇಕ ಕ್ಷೇತ್ರದ ಸಾಧಕರೆಲ್ಲರೂ ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿಸಿಕೊಂಡೇ ಯಶಸ್ಸನ್ನು ಕಂಡವರು. ಹೀಗಾಗಿ ಸೋಲು, ಗೆಲುವಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ನಿಮ್ಮ ಮೇಲೆ ನಂಬಿಕೆ ಇಟ್ಟು ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಹಾಕಿ. ಯಶಸ್ಸು ನಿಮ್ಮ ಬಳಿಯೇ ಬರುತ್ತದೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿಗಳ ಬಹುಮುಖ್ಯ ಭಾಗವಾಗಿದೆ. ಪರೀಕ್ಷೆ ಬಗ್ಗೆ ಹೆಚ್ಚು ಟೆನ್ಶನ್ ಮಾಡಿಕೊಳ್ಳದೇ ಪರೀಕ್ಷೆಯನ್ನು ಆತ್ಮವಿಶ್ವಾಸದೊಂದಿಗೆ ಎದುರಿಸಿದರೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದರಲ್ಲದೆ, ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ ವಿದ್ಯಾರ್ಥಿಗಳಲ್ಲಿ ಚೈತನ್ಯ ಮೂಡಿಸಿದ ಬಸವರಾಜ ಹೊರಟ್ಟಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.