ಬೆಂಗಳೂರು: ಸಿದ್ದರಾಮಯ್ಯ ಬೇಡ, ನೀವು ಮೊದಲು ಜಮೀರ್ʼನನ್ನು ಫೇಸ್ ಮಾಡಿ ಎಂದು ಕುಮಾರಸ್ವಾಮಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲ್ ಹಾಕಿದ್ದಾರೆ. ಸರ್ಕಾರದ ಕುತಂತ್ರದಿಂದ ಎಸ್ಐಟಿ ಲೋಕಾಯುಕ್ತ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ಗೆ ಕೇಳಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು,
ಕುಮಾರಸ್ವಾಮಿ ಮಾತನಾಡಿದರೆ ಧಮ್ಕಿ ಹಾಕೋದು, ಬ್ಲ್ಯಾಕ್ಮೇಲ್ ಮಾಡೋದು. ಇದು ಎಷ್ಟು ದಿನ ನಡೆಯುತ್ತದೆ ಕುಮಾರಸ್ವಾಮಿ ಅವರೇ? ಸಿದ್ದರಾಮಯ್ಯ ಬೇಡ, ನೀವು ಮೊದಲು ಜಮೀರ್ನನ್ನು ಫೇಸ್ ಮಾಡಿ. ಬಾಯಿಗೆ ಬಂದಂತೆ ಮಾತನಾಡೋದ ಎಂದು ವಾಗ್ದಾಳಿ ನಡೆಸಿದರು.
ನಾನು ರಾಮನಗರದಲ್ಲಿ ನಿಮಗೆ ಏನು ಕೇಳಿದೆ? ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎಷ್ಟು ಮನೆ ರಾಮನಗರ ಜನರಿಗೆ ಕೊಟ್ಟಿದ್ದೀರಾ ಎಂದು ಕೇಳಿದೆ. ಸಿಎಂ ಆದರೂ ನಿಮ್ಮ ಜಿಲ್ಲೆಗೆ ಮನೆ ಕೊಟ್ಟಿಲ್ಲ. ಇದನ್ನು ಕೇಳಿದ್ದು ನಾನು.
ಇದಕ್ಕೆ ಅವನು ಯಾರು ಒಂದು ಬಸ್ಗೆ ಎರಡು ನಂಬರ್ ಹಾಕಿಕೊಂಡು ಓಡಿಸಿದ್ದವನು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಒಂದು ನಂಬರ್ ಎರಡು ಬಸ್ಗೆ ಹಾಕಿಸಿ ಓಡಿಸೋನು ಆಗಿದ್ದರೆ 2017ರವರೆಗೆ ನನ್ನನ್ನು ಯಾಕೆ ನಿಮ್ಮ ಜೊತೆ ಇಟ್ಟುಕೊಂಡ್ರಿ ಎಂದು ಪ್ರಶ್ನೆ ಮಾಡಿದರು.