ವಿಜಯಸಾಕ್ಷಿ ಸುದ್ದಿ, ಡಂಬಳ: ಸದಾಕಾಲ ತಮ್ಮ ಪ್ರಾಮಾಣಿಕ ಕರ್ತವ್ಯದ ಮೂಲಕ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ರಾಮಣ್ಣ ಭರಮಪ್ಪ ಹೋಸಕೇರಿ ಮೇ 31ರಂದು ನಿವೃತ್ತಿ ಹೊಂದಿದರು.
1994ರಲ್ಲಿ ಸಿಂಗಟಾಲೂರಿನಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿ, ಬಳಿಕ 1996ರಲ್ಲಿ ಪೇಠಾ ಆಲೂರನಲ್ಲಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 14 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಡಂಬಳ ಗ್ರಾಮದಲ್ಲಿ 2010ರಿಂದ ಸತತ 9 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. 2020ರಲ್ಲಿ ದಿಂಡೂರ ಗ್ರಾಮದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಮುಖ್ಯೋಪಾಧ್ಯಾಯರಾಗಿ ಶಾಲೆಗಳ ಅಭಿವೃದ್ಧಿಯ ಜೊತೆಗೆ ಮಕ್ಕಳ ಭವಿಷ್ಯ ಕಟ್ಟಲು ಶ್ರಮಿಸಿದ ಶ್ರೇಯಸ್ಸು ಶಿಕ್ಷಕ ಆರ್.ಬಿ. ಹೊಸಕೇರಿ ಅವರದಾಗಿದೆ. ವಿದ್ಯಾರ್ಥಿಗಳ ಮೆಚ್ಚುಗೆಯ ಶಿಕ್ಷಕರಾಗಿ ಗ್ರಾಮೀಣ ಮಕ್ಕಳ ಆಶಾಕಿರಣವಾಗಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿ, ಹಲವು ಉನ್ನತ ಹುದ್ದೆಗಳನ್ನು ಹೊಂದುವಂತೆ ಮಾಡಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಕರ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಿ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಲು ಪ್ರತಿಯೊಬ್ಬ ಶಿಕ್ಷಕರು ಶ್ರಮಿಸಲು ಮುಂದಾಗಬೇಕು ಎನ್ನುತ್ತಾರೆ ನಿವೃತ್ತ ಶಿಕ್ಷಕ ರಾಮಣ್ಣ ಹೊಸಕೇರಿ.
ವಿದ್ಯಾರ್ಥಿಗಳು, ಪಾಲಕರೊಂದಿಗೆ ಸದಾಕಾಲ ಬೆರೆತು ಕಲಿಯಲು ಬಂದ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕರಾಗಿ ನಿವೃತ್ತಿಯ ಅಂಚಿನವರೆಗೂ ಅನುಪಮ ಸೇವೆ ಸಲ್ಲಿಸಿದ ಇವರ ಬೋಧನಾ ಕೌಶಲ್ಯ ಅನುಪಮವಾದದ್ದು ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಮ್. ಪಾಟೀಲ ಮೆಚ್ಚುಗೆ ಸೂಚಿಸಿದರು.