ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಹೆತ್ತ ತಂದೆ-ತಾಯಿ, ವಿದ್ಯೆ ನೀಡಿದ ಗುರುಗಳು ದೇವರ ಸಮಾನ ಮತ್ತು ಸದಾ ಸ್ಮರಣೀಯರು ಎಂದು ಪ್ರಖ್ಯಾತ ಮೆದುಳು ಮತ್ತು ನರರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಎಸ್.ಪಿ. ಬಳಿಗಾರ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಶಿಗ್ಲಿಯ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆ, ಶ್ರೀಮತಿ ಜಾನಕಿಬಾಯಿ ರಜಪೂತ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಪುಟ್ಟಯ್ಯ ಸಂಗಯ್ಯ ಕೂಡ್ಲಮಠ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮತ್ತು ವೈದ್ಯರುಗಳಿಂದ ಅಗಲಿದ ಶಿಕ್ಷಕರ ಸ್ಮರಣಾರ್ಥ ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ನಾಲ್ಕೈದು ದಶಕಗಳ ಹಿಂದೆ ಗುರು-ಶಿಷ್ಯರ ಸಂಬಂಧ ಅತ್ಯಂತ ಶ್ರೇಷ್ಠವಾಗಿತ್ತು. ಶಿಕ್ಷಣ ಸೇವೆಗಾಗಿಯೇ ಬದುಕನ್ನು ಮೀಸಲಿರಿಸಿದ್ದ ಅವರು ಶಿಕ್ಷಣದ ಜತೆಗೆ ಮಕ್ಕಳಿಗೆ ಮಾನವೀಯ ಮೌಲ್ಯ, ಸಂಸ್ಕಾರ ನೀಡಿ ಪರಿಪೂರ್ಣ ಬದುಕಿಗೆ ಅಣಿಯಾಗಿಸುತ್ತಿದ್ದರು. ಮನುಷ್ಯನಿಗೆ ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯವಾಗಿದ್ದು, ನಿತ್ಯದ ಬದುಕಿನಲ್ಲಿ ದುಶ್ಚಟ, ದುರ್ಗುಣಗಳಿಂದ ದೂರವಿದ್ದು ಸತ್ಸಂಗ, ಸದ್ವಿಚಾರ, ಸಾತ್ವಿಕ ಆಹಾರ, ವ್ಯಾಯಾಮ ರೂಢಿಸಿಕೊಳ್ಳಬೇಕು. ಅಗಲಿದ ಶಿಕ್ಷಕರ ಸ್ಮರಣಾರ್ಥವಾಗಿ ಗ್ರಾಮೀಣ ಭಾಗದ ಬಡವರ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್.ಪಿ. ಬಳಿಗಾರ ಮಾತನಾಡಿ, ಎಸ್.ಎಸ್. ಕೂಡ್ಲಮಠ ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಇಂದು ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ಈ ಶಾಲೆಯಲ್ಲಿ ಕಲಿತ ಹೃದಯರೋಗ ತಜ್ಞರಾದ ಡಾ. ರವಿ ಸಾಲ್ಮನಿ, ಡಾವಣಗೆರೆ ಎಸ್.ಎಸ್. ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಡಾ. ಎನ್.ಕೆ. ಕಾಳಪ್ಪನವರ, ತಜ್ಞ ವೈದ್ಯರಾದ ಪ್ರದೀಪ ಕಲ್ಲೊಳ್ಳಿಮಠ ಸೇರಿ ಸ್ಥಳೀಯ ವೈದ್ಯರುಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು. ಶಿಗ್ಲಿ ಸೇರಿ ಸುತ್ತಲಿನ ಗ್ರಾಮಗಳ 800ಕ್ಕೂ ಹೆಚ್ಚು ರೋಗಿಗಳಿಗೆ ವೈದ್ಯಕೀಯ ತಪಾಸಣೆ, ಚಿಕಿತ್ಸೆ ಮತ್ತು ಔಷಧೋಪಚಾರ ನೀಡಲಾಯಿತು.
ಈ ವೇಳೆ ಶಿಕ್ಷಣ ಸಂಸ್ಥೆಯ ಎಫ್.ಡಿ. ಹುನಗುಂದ, ಜಿ.ಎಫ್. ಘಂಟಾಮಠ, ಸಿ.ಎಂ. ರಾಗಿ, ಎಚ್.ಎಫ್. ತಳವಾರ, ಬಿ.ಎಂ. ಕಳಸದ, ಎನ್.ಬಿ. ಪಾಟೀಲ, ವೀರಣ್ಣ ಪವಾಡದ, ಪ್ರವೀಣ ಕಾಳಪ್ಪನವರ, ಡಿ.ವೈ. ಹುನಗುಂದ, ಸೋಮಣ್ಣ ಡಾಣಗಲ್, ಸಿದ್ದಣ್ಣ ಯಲಿಗಾರ, ಸಿ.ಬಿ. ಮುಗಳಿ, ಎಲ್.ಪಿ. ಲಮಾಣಿ, ಪಿ.ಸಿ. ಹಿರೇಮಠ, ಎಸ್.ಎ. ಪಾಟೀಲ, ಎಸ್.ಎಸ್. ಕಳ್ಳಳ್ಳಿ ಮುಂತಾದವರಿದ್ದರು. ಆರ್.ಎಂ. ಜಂಬೇರಾಳ, ಬಿ.ಬಿ. ಚಿಟಗಿ, ಆರ್.ಎಂ. ಬಸಾಪುರ ನಿರೂಪಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ಮನುಷ್ಯ ಸಮಾಜ ಜೀವಿಯಾಗಿದ್ದು, ಸಮಾಜಕ್ಕಾಗಿ ಸೇವೆ ಮಾಡುವ ಮನೋಗುಣ ಬೆಳೆಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಕೃಷಿ, ರಾಜಕೀಯ ಯಾವುದೇ ಕ್ಷೇತ್ರದಲ್ಲಿ ಪ್ರಾವೀಣ್ಯತೆ ಹೊಂದಿದ ವಿದ್ಯಾರ್ಥಿಗಳು ತಾವು ಕಲಿತ ಶಾಲೆ, ಕಲಿಸಿದ ಗುರುಗಳು, ಹೆತ್ತವರ ಸ್ಮರಣೆಯ ನೆಪದಲ್ಲಿ ಸಮಾಜ ಸೇವೆ ಮಾಡುವುದು ಅವರಿಗೆ ಸಲ್ಲಿಸುವ ಗೌರವವಾಗಿದೆ. ಆ ಮೂಲಕ ಬದುಕನ್ನು ಸಾರ್ಥಕಗೊಳಿಸೋಣ. ಶಿಕ್ಷಣ ಕ್ಷೇತ್ರಕ್ಕೆ ಜಿಲ್ಲೆಯಲ್ಲಿಯೇ ಶಿಗ್ಲಿ ಗ್ರಾಮದ ಕೊಡುಗೆ ಶ್ರೇಷ್ಠವಾಗಿದೆ ಎಂದರು.



