ಯೋಗದಿಂದ ಆರೋಗ್ಯಯುತ ಜೀವನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿಶ್ವದ ತುಂಬೆಲ್ಲಾ ಬಹುತೇಕ ಜನರು ಒಂದಿಲ್ಲೊಂದು ರೋಗಗಳಿಂದ ಬಳಲುತ್ತಿದ್ದಾರೆ. ವಿವಿಧ ಆಹಾರ ಪದ್ಧತಿಗಳಿಂದ ರೋಗ ಮುಕ್ತ ಜೀವನ ಸಾಧ್ಯವೇ ಇಲ್ಲ ಎಂಬ ಈ ದಿನಮಾನಗಳಲ್ಲಿ ಪ್ರತಿಯೊಬ್ಬರೂ ನಿಯಮಿತವಾಗಿ ಯೋಗ ಮಾಡುವುದನ್ನು ರೂಢಿಸಿಕೊಂಡರೆ ಶಾಂತಿಯುತ, ಆರೋಗ್ಯಯುತ ಜೀವನ ನಡೆಸಲು ಸಾಧ್ಯ ಎಂದು ಗದುಗಿನ ಯೋಗ ತರಬೇತುದಾರರು ಹಾಗೂ ನಿಸರ್ಗ ಚಿಕಿತ್ಸಾ ತಜ್ಞರಾದ ಡಾ. ಸತೀಶ ಹೊಂಬಾಳಿ ಹೇಳಿದರು.

Advertisement

ನಗರದ ಸಂಭಾಪುರ ರಸ್ತೆಯಲ್ಲಿರುವ ಶ್ರೀ ಶಂಕರ ಮಠದಲ್ಲಿ ಅದ್ವೈತ ಪ್ರಸಾರ ಪರಿಷತ್ ಏರ್ಪಡಿಸಿದ್ದ 38ನೇ `ಅದ್ವೈತಾನುಭವ’ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುರಿತು ಅವರು ಮಾತನಾಡಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ವೇ.ಮೂ. ರತ್ನಾಕರಭಟ್ಟ ಜೋಷಿ ಆಶೀರ್ವಚನ ನೀಡಿ, ಬ್ರಾಹ್ಮಣರು ನಡೆಸುವ ದಿನಚರಿಯೇ ಒಂದು ಯೋಗ. ನಿತ್ಯ ಕರ್ಮಗಳಾದ ತ್ರಿಕಾಲ ಸಂಧ್ಯಾವಂದನೆ, ಉಪವಾಸ, ಏಕಾದಶಿಯ ಆಚರಣೆ ಹಾಗೂ ಪೂಜೆಯ ಎಲ್ಲ ಕ್ರಿಯೆಗಳೂ ಯೋಗದ ಭಾಗಗಳಾಗಿವೆ. ಆದ್ದರಿಂದ ಎಲ್ಲ ಪಾಲಕರೂ ತಮ್ಮ ಮಕ್ಕಳಿಗೆ ಈ ವಿಷಯವನ್ನು ತಿಳಿಸಿ, ಬ್ರಾಹ್ಮಣರ ಆಚರಣೆಗಳು ವೈಜ್ಞಾನಿಕ ಆಧಾರವಾಗಿವೆ ಎಂಬುದನ್ನು ಮನದಟ್ಟು ಮಾಡಿಸಬೇಕು ಎಂದು ಹೇಳಿದರು.

`ಸನಾತನ ಧರ್ಮದಲ್ಲಿ ವಿಜ್ಞಾನ’ ವಿಷಯದ ಕುರಿತು ತನ್ವೀ ಮೋನೆ ಮಾತನಾಡಿದರು. ಗಣಪತಿ ಕೌಜಲಗಿ ಅದ್ವೈತ ಮಂಥನ ಶಿರ್ಷಿಕೆಯಡಿಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಪ್ರಾರಂಭಕ್ಕೂ ಮುನ್ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು. ಬ್ರಹ್ಮವೃಂದದ ವೇದಘೋಷದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜ್ಯೋತಿ ಇನಾಮದಾರ ಪ್ರಾರ್ಥಿಸಿದರು. ಗುರುಮೂರ್ತಿ ದೇಶಪಾಂಡೆ ಸ್ವಾಗತಿಸಿದರು. ಶಾಂಕರ ಮಾಲಿಕೆಯ ಪಠಣವನ್ನು ಸಮರ್ಥ ಪಂತರ ನಡೆಸಿಕೊಟ್ಟರು. ಹೇಮಂತ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರೆ, ಗಣೇಶಭಟ್ಟ ಪುರಾಣಿಕ ವಂದಿಸಿದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅನಿಲ ತೆಂಬದಮನಿ ಹಾಗೂ ಹೇಮಂತ ಕುಲಕರ್ಣಿ ವಹಿಸಿಕೊಂಡಿದ್ದರು.

ನಿವೃತ್ತ ಶಿಕ್ಷಕಿ ರಮಾದೇವಿ ಮ್ಯಾಗೇರಿ ಹಲವಾರು ಯೋಗಾಸನಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ರಾಮಚಂದ್ರ ಮೋನೆ ಮಾತನಾಡಿ, ಯೋಗ, ಸಂಧ್ಯಾವಂದನೆ ಹಾಗೂ ಬಾಲವಿಕಾಸದಂತಹ ಶಿಬಿರಗಳನ್ನು ಸಮಾಜದ ಒಳಿತಿಗಾಗಿ ಅದ್ವೈತ ಪ್ರಸಾರ ಪರಿಷತ್ ನಡೆಸಿಕೊಂಡು ಬಂದಿದೆ. ಅವುಗಳನ್ನು ಮುಂದಿನ ದಿನಮಾನಗಳಲ್ಲಿಯೂ ನಡಸುತ್ತದೆ ಎಂದರು.


Spread the love

LEAVE A REPLY

Please enter your comment!
Please enter your name here