ಬೆಳಗಾವಿ/ಹುಬ್ಬಳ್ಳಿ: ದಿನಹೋದಂತೆ ವೈರಸ್ನಂತೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅಲ್ಲದೇ ಹೃದಯಾಘಾತದಿಂದ ಸಾವನ್ನಪ್ಪಿದ್ದವರ ಬಗ್ಗೆ ತನಿಖೆ ನಡೆಸಲು ಸರ್ಕಾರ ವಿಶೇಷ ಸಮಿತಿಯನ್ನೂ ರಚಿಸಿದೆ. ಇದೀಗ ಹಠಾತ್ ಹೃದಯಾಘಾತದಿಂದ ಕರ್ತವ್ಯನಿರತ ಎಎಸ್ಐಯೊಬ್ಬರು ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ನಲ್ಲಿ ನಡೆದಿದೆ.
ಮೂಲತಃ ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದ ಲಾಲ್ಸಾಬ ಮೀರಾನಾಯ್ಕ (55) ಮೃತ ಎಎಸ್ಐಯಾಗಿದ್ದು, ಹುಬ್ಬಳ್ಳಿಯ ನವನಗರ ಎಪಿಎಂಸಿ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೀರಾನಾಯ್ಕ ಅವರನ್ನು ಕಳೆದ ಐದು ದಿನಗಳಿಂದ ಗೋಕಾಕ್ನ ಮಹಾಲಕ್ಷ್ಮಿ ಜಾತ್ರೆಯ ಬಂದೋಬಸ್ತಿಗಾಗಿ ನಿಯೋಜನೆ ಮಾಡಲಾಗಿತ್ತು.
ಜುಲೈ 5ರಂದು ಬೆಳಗ್ಗೆ ಮೀರಾನಾಯ್ಕ್ ಅವರು ತೀವ್ರ ಎದೆನೋವಿನಿಂದ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಇತರೆ ಸಿಬ್ಬಂದಿ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು.
ಆದರೆ ವೈದ್ಯರು ಪರೀಕ್ಷಿಸಿದಾಗ ಅವರು ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದರು. ಮೃತರಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು- ಬಳಗವಿದೆ.