ಹಾಸನ:- ಜಿಲ್ಲೆಯಲ್ಲಿ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯದ ಜನರಲ್ಲಿ ಆತಂಕ ಮೂಡಿಸಿದೆ. ಅದರಂತೆ ಇಂದು ಸಂಜೆ ವೇಳೆ ಆಟೋ ಚಾಲಕನೋರ್ವ ಹೃದಯಾಘಾತದಿಂದ ರಸ್ತೆಗೆ ಕುಸಿದುಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತರನ್ನು ಹಾಸನ ನಗರದ ರಂಗೋಲಿ ಹಳ್ಳ ಬಡಾವಣೆ ನಿವಾಸಿ ಸತ್ಯನಾರಾಯಣ ರಾವ್ (63) ಎಂದು ಗುರುತಿಸಲಾಗಿದೆ. ಅವರು ಪ್ರತಿದಿನದಂತೆ ಇಂದು ಬೆಳಿಗ್ಗೆಯೂ ಆಟೋ ಚಾಲನೆಗಾಗಿ ಮನೆಯಿಂದ ಹೊರಟಿದ್ದರು. ಹಾಸನಾಂಬ ದೇಗುಲ ಹಿಂಭಾಗದ ಹೊಸಲೈನ್ ರಸ್ತೆಯ ಬಳಿ ಆಟೋ ಚಲಾಯಿಸುತ್ತಿದ್ದ ವೇಳೆ ಅಸ್ವಸ್ಥರಾಗಿದ್ದು, ತಕ್ಷಣವೇ ಆಟೋದೊಳಗೆ ಕುಸಿದು ಬಿದ್ದರು. ಈ ಘಟನೆಯ ಸಮಯದಲ್ಲಿ ಅಕ್ಕಪಕ್ಕದಲ್ಲಿದ್ದ ಜನರು ಬೆಚ್ಚಿಬಿದ್ದು, ಸಹಾಯಕ್ಕೆ ಓಡಿದರು. ಸ್ಥಳದಲ್ಲೇ ಹಾಜರಿದ್ದ ನರ್ಸಿಂಗ್ ವಿದ್ಯಾರ್ಥಿಗಳು ತಕ್ಷಣ ಸತ್ಯನಾರಾಯಣರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಗಲೇ ಅವರ ಪ್ರಾಣ ಹೋಗಿದ್ದಾಗಿ ವೈದ್ಯರು ದೃಢಪಡಿಸಿದರು.
ಸತ್ಯನಾರಾಯಣ ರಾವ್ ಅವರು ಕೆಲ ಸಮಯದ ಹಿಂದೆ ಹೃದಯ ಸಂಬಂಧಿ ಖಾಯಿಲೆಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಆದರೆ ಇಂದು ಬೆಳ್ಳಿಗ್ಗೆ ಮನೆಯಿಂದ ಆಟೋ ಚಾಲನೆಗಾಗಿ ಹೊರಟ ಕೆಲವೇ ನಿಮಿಷಗಳಲ್ಲಿ ಅಕಾಲಿಕ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.