ಬೆಳಗಾವಿ:- ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ಜರುಗಿದೆ.
ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 16 ವರ್ಷದ ತಮ್ಮ ಸತೀಶ್ ಬಾಗನ್ನವರ, 24 ವರ್ಷದ ಅಣ್ಣ ಬಸವರಾಜ್ ಬಾಗನ್ನವರ ಮೃತ ದುರ್ದೈವಿಗಳು. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸತೀಶ್ ಶನಿವಾರ ಮುಂಜಾನೆ ಅನಾರೋಗ್ಯದಿಂದ ಮೃತಪಟ್ಟಿದ್ದ. ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣ ಬಸವರಾಜ್ ಅಲ್ಲೇ ಕುಸಿದು ಬಿದ್ದಿದ್ದ. ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ತುಂಬು ಗರ್ಭಿಣಿಯಾಗಿದ್ದ ಬಸವರಾಜ್ ಪತ್ನಿ ಪವಿತ್ರಾ, ಪತಿಯ ಸಾವಿನ ಸುದ್ದಿ ತಿಳಿದು ಕುಸಿದ್ದಿದ್ದರು. ತಕ್ಷಣವೇ ಆಕೆಯನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಅದೃಷ್ಟವಶಾತ್ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಇದೀಗ ಮನೆಗೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.



