ಕೋಲಾರ: ಕಳೆದ ಮಂಗಳವಾರವಷ್ಟೆ ಸುಳ್ಳು ಮಾಹಿತಿ ನೀಡಿ ಕೆಜಿಎಫ್ ಮೂಲದ ದಂಪತಿ ಮಗು ಬಿಟ್ಟು ಎಸ್ಕೇಪ್ ಆಗಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಬೇಜವಾಬ್ದಾರಿ ಘಟನೆ ನಡೆದಿದೆ. ಹೌದು ಜನ್ಮಕೊಟ್ಟ ತಾಯಿಯೇ ಮಗುವನ್ನು ಬಿಟ್ಟು ಹೋಗಿರುವ ಘಟನೆ ಕೋಲಾರ ನಗರದ SNR ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೌನಿಕಾ (19) ಮಗುವನ್ನು ಬಿಟ್ಟು ಹೋದ ಪಾಪಿ ತಾಯಿ ಎನ್ನಲಾಗಿದೆ.
ಜೂ.12 ರಂದು ಸಂಜೆ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಳು. ವಿಳಾಸ ಸೇರಿದಂತೆ ಯಾವುದೇ ದಾಖಲಾತಿ ನೀಡದೆ ಕುಟುಂಬದ ಮದುವೆಗೆ ಬಂದಿದ್ದೆ ಹೆರಿಗೆ ನೋವು ಎಂದು ನಾರ್ಮಲ್ ಹೆರಿಗೆ ಮಾಡಿಸಿಕೊಂಡಿದ್ದಾಳೆ. ತುರ್ತು ಹೆರಿಗೆ ಇರೋದರಿಂದ ಮಾನವೀಯತೆ ದೃಷ್ಟಿಯಲ್ಲಿ ವೈದ್ಯೆ ಡಾ.ಶಾಂತ ಹೆರಿಗೆ ಮಾಡಿದ್ದಾರೆ. ಹೆರಿಗೆ ಬಳಿಕ ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ಪೇರೆಸಂದ್ರವಳು, ಗಂಡ ಶ್ರೀನಿವಾಸ್ ಅಂತ ಮೊಬೈಲ್ ನಂಬರ್ ಸಮೇತ ಸುಳ್ಳು ಮಾಹಿತಿ ನೀಡಿದ್ದಾಳೆ.
ನಿನ್ನೆ ಬೆಳಿಗ್ಗೆ 5 ಗಂಟೆಯಲ್ಲಿ ಟೀ ಕುಡಿದು ಬರೋದಾಗಿ ಹೇಳಿ ತಾಯಿ ಎಸ್ಕೇಪ್ ಆಗಿದ್ದಾಳೆ. ಮೌನಿಕಾ ಕೊಟ್ಟಿರುವ ನಂಬರ್ ಗೆ ಕರೆ ಮಾಡಿದ್ರೆ ರಾಂಗ್ ನಂಬರ್, ವಿಳಾಸವು ತಪ್ಪು ಎಂದು ತಿಳಿದು ಬಂದಿದೆ. ಅದಲ್ಲದೆ ತಾಯಿಯ ಆಶ್ರಯ ಸಿಗದೆ ಹೆಣ್ಣು ಶಿಶು ಆಸ್ಪತ್ರೆಯಲ್ಲಿ ನರಳಾಡಿದ್ದು, ಮಗು 1.5 ಕೆಜಿ ಇರೋದ್ರಿಂದ ಬೇರೆಯವರ ಎದೆ ಹಾಲು ಕುಡಿಸಿ ವೈದ್ಯರಿಂದ ಆರೈಕೆ ಮಾಡಲಾಗಿದೆ. ಇನ್ನೂ ಸಿಸಿ ಟಿವಿ ಆಧರಿಸಿ ಕ್ರೂರ ತಾಯಿಗಾಗಿ ಕೋಲಾರ ನಗರ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕೋಲಾರ ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳ, ಸೆಕ್ಯೂರಿಟಿ ವೈಫಲ್ಯದಿಂದ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ. ಆಗ ತಾನೇ ಹೆರಿಗೆ ಆಗಿರುವ ಮಹಿಳೆಯನ್ನು ವಾರ್ಡ್ ನಿಂದ ಹೊರಗೆ ಕಳುಹಿಸಿದ್ದು ಯಾರು? ಹೊರಗೆ ಟೀ ಕುಡಿದು ಬರ್ತೀನಿ ಅಂದಾಗ ಅನುಮತಿ ನೀಡಿದ್ದು ಯಾರು ? ಎಂಬಿತ್ಯಾದಿ ಪ್ರಶ್ನೆಗಳು ಸೇರಿದಂತೆ ಏನೇ ನಡೆದರು, ಯಾರೇ ಬಂದು ಹೋದರು ಹೇಳೋರು, ಕೇಳೋರು ಇಲ್ಲ ಎಂಬ ಮಾತುಗಳು ಕೋಲಾರ ಜಿಲ್ಲಾಸ್ಪತ್ರೆ ವಿರುದ್ಧ ಕೇಳಿ ಬಂದಿವೆ.
ಇನ್ನೂ ಆಕೆ ಟೀ ಕುಡಿದು ಬರ್ತೀನಿ ಅಂತ ಹೋದ್ರೆ ನಾವೇನು ಮಾಡೋಕೆ ಆಗುತ್ತೆ ಅಂತ DS ಡಾ. ಜಗದೀಶ್ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇದೇ ವೇಳೆ ಮಗು ಅರೋಗ್ಯವಾಗಿದೆ, ಬೇರೆಯವರ ಎದೆ ಹಾಲು ಕೊಡ್ತಿದ್ದೇವೆ ಅಂತ ಮಕ್ಕಳ ವೈದ್ಯ ಡಾ. ಕಮಲಾಕಾರ್ ಹೇಳಿದ್ದಾರೆ. ಇನ್ನೂ ಸರಣಿ ಘಟನೆಗಳ ಕುರಿತು ಕೋಲಾರ ಆಸ್ಪತ್ರೆಯ DS ಡಾ. ಜಗದೀಶ್ ಸೇರಿದಂತೆ ಸಿಬ್ಬಂದಿಗಳ ವಿರುದ್ಧ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.