ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಪುರಸಭೆಯಲ್ಲಿ ಸೋಮವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಕಾವೇರಿದ ಚರ್ಚೆಗಳು ನಡೆದು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.
ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಪ್ರವೀಣ ಬಾಳಿಕಾಯಿ ಹಾಗೂ ಸದಸ್ಯರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದ ಬಳಿಕ ಮಾತನಾಡಿ, ಪಟ್ಟಣದಲ್ಲಿ ನೀರು ಸರಬರಾಜು ವಿಷಯಕ್ಕೆ ಸಂಬಂಧಿಸಿದಂತೆ ನಿರ್ವಹಣೆಯ ಕೊರತೆ ಎದ್ದು ಕಾಣುತ್ತಿದೆ. ಮಳೆಗಾಲದಲ್ಲೂ 15-20 ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ನೀರು ಸರಬರಾಜಿಗಾಗಿ ಯಥೇಚ್ಛವಾಗಿ ಜನರಲ್ ಫಂಡ್ನಿಂದ ಖರ್ಚು ಮಾಡಲಾಗುತ್ತಿದೆ. ಆದರೂ ಏಕೆ ಸರಿಯಾಗಿ ನೀರು ಪೂರೈಕೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು.
ಬಳಿಕ 15ನೇ ಹಣಕಾಸು, ಸಾಮಾನ್ಯ ಮೂಲ ಅನುದಾನದಲ್ಲಿ ಮುಕ್ತ ನಿಧಿಯ ಒಟ್ಟು 76 ಲಕ್ಷ ರೂಗಳಲ್ಲಿ ರಸ್ತೆ ಕಾಮಗಾರಿಗೆ ಕರೆಯಲಾಗಿದ್ದ ಟೆಂಡರ್ ರದ್ದುಪಡಿಸಿ ಬದಲಿ ಕಾಮಗಾರಿಗೆ ಹೊಸ ಕ್ರಿಯಾಯೋಜನೆ ರೂಪಿಸುವ ಕುರಿತು ಬಿಸಿಬಿಸಿ ಚರ್ಚೆಗಳು ನಡೆದವು. ಪಟ್ಟಣದ ಹಾವಳಿ ಆಂಜನೆಯ ದೇವಸ್ಥಾನದಿಂದ ಕೆಂಚಲಾಪೂರ ಶಾಲೆಯವರೆಗಿನ ರಸ್ತೆಯನ್ನು ನಿರ್ಮಿಸಲು ಅನೇಕ ಸಂಘಟನೆಗಳು, ಸಾರ್ವಜನಿಕರು ಒತ್ತಾಯಿಸಿದ್ದು, ಅದೇ ರಸ್ತೆಗೆ ಮರು ಟೆಂಡರ್ ಕರೆಯುವಂತೆ ಆಡಳಿತ ಪಕ್ಷದವರು ಒತ್ತಾಯಿಸಿದರು. ಇದನ್ನು ಒಪ್ಪದ ವಿರೋದ ಪಕ್ಷಗಳ ಸದಸ್ಯರು ಈ ರಸ್ತೆ ಪೂರ್ಣಗೊಳಿಸುವದಕ್ಕೆ ನಮ್ಮದು ಯಾವುದೇ ತರಹದ ವಿರೋಧವಿಲ್ಲ. ಆದರೆ ಈ ಮೊದಲು ಶಾಸಕರ ನೇತೃತ್ವದ ಕ್ರಿಯಾಯೋಜನೆಯಂತೆ ಕರೆಯಲಾದ ಕಾಮಗಾರಿಗಳ ಟೆಂಡರ್ ಜಾರಿಗೆ ತರುವ ಮೂಲಕ ಅವರ ನಿರ್ಣಯಕ್ಕೆ ಗೌರವ ಕೊಡುವಂತೆ ಸದಸ್ಯೆಯರಾದ ಅಶ್ವಿನಿ ಅಂಕಲಕೋಟಿ, ಪೂರ್ಣಿಮಾ ಪಾಟೀಲ, ವಾಣಿ ಹತ್ತಿ ಆಗ್ರಹಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ಸಹಮತ ಸೂಚಿಸಲಿಲ್ಲ. ಇದಕ್ಕೆ ಆಡಳಿತ ಪಕ್ಷದ 11 ಸದಸ್ಯರು, ವಿರೋಧ ಪಕ್ಷಗಳ 7 ಸದಸ್ಯರು ಪರ-ವಿರೋಧ ಮನವಿ ಯನ್ನು ಅಧ್ಯಕ್ಷರಿಗೆ ಸಲ್ಲಿಸಿದರು. ಬಹುಮತವಿದ್ದ ಆಡಳಿತ ಪಕ್ಷದ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ಅಧ್ಯಕ್ಷೆ ಯಲ್ಲಮ್ಮ ದುರ್ಗಣ್ಣವರ ಘೋಷಿಸಿದರು.
ಸಭೆಯಲ್ಲಿ ಅಧ್ಯಕ್ಷೆ ಯಲ್ಲವ್ವ ದುರ್ಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯರಾದ ಬಸವರಾಜ ಓದುನವರ, ಮಹೇಶ ಹೊಗೆಸೊಪ್ಪಿನ, ಜಯಕ್ಕ ಕಳ್ಳಿ, ಮುಸ್ತಾಕ ಶಿರಹಟ್ಟಿ, ರಾಮಪ್ಪ ಗಡದವರ, ಜಯಮ್ಮ ಅಂದಲಗಿ, ಮಹಾದೇವಪ್ಪ ಅಣ್ಣಿಗೇರಿ, ಮಂಜವ್ವ ನಂದೆಣ್ಣವರ, ಸಿಕಂದರ ಕಣಕೆ, ವಿಜಯ ಕರಡಿ, ಎಸ್.ಕೆ. ಹವಾಲ್ದಾರ, ಕವಿತಾ ಶರಸೂರಿ, ಪೂಜಾ ಖರಾಟೆ, ಮುಖ್ಯಾಧಿಕಾರಿ ಮಹೇಶ, ಕೆಯುಡಬ್ಲುಎಸ್ಡಿಬಿ ಇಲಾಖೆ ಇಇ ಜಿ.ಬಿ. ಹೊಸಮನಿ, ಇಂಜಿನಿಯರ್ ಕಾಟೇವಾಲೆ ಇದ್ದರು. ಹನುಮಂತ ನಂದೆಣ್ಣವರ, ಮಂಜುಳಾ ಹೂಗಾರ ನಿರೂಪಿಸಿದರು.
ಆಡಳಿತ ಪಕ್ಷದ ಹಿರಿಯ ಸದಸ್ಯ ರಾಜಣ್ಣ ಕುಂಬಿ ಮಾತನಾಡಿ, ತುಂಗಭದ್ರಾ ನದಿ ಪಾತ್ರದ ಮೇವುಂಡಿ ಜಾಕ್ವೆಲ್ನಿಂದ ಲಕ್ಷ್ಮೇಶ್ವರಕ್ಕೆ ನೀರು ಸರಬರಾಜು ಮಾಡುವ ಪೈಪ್ಲೈನ್ ಹಾಳಾಗಿದ್ದು ಹೊಸ ಪೈಪ್ಲೈನ್ ಅಳವಡಿಕೆಗೆ ಎಲ್ಲರೂ ಸೇರಿ ಸಕಾರದಿಂದ ಅನುದಾನ ತರುವ ಪ್ರಯತ್ನ ಮಾಡೋಣ ಎಂದು ಸಲಹೆ ನೀಡಿದರಲ್ಲದೆ, ಸದ್ಯಕ್ಕೆ ನೀರಿನ ಸಮಸ್ಯೆ ಬಗೆಹರಿಸುವದು ಅಗತ್ಯವಾಗಿದ್ದು ಇದ್ದ ಪೈಪ್ಲೈನ್ ನವೀಕರಣ/ದುರಸ್ಥಿಗೆ ಅದ್ಯತೆ ನೀಡಿ ಎಂದು ಹೇಳಿದರು.