ಮಂಗಳೂರು:- ಕರ್ನಾಟಕದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದ್ದು, ರಾಜ್ಯದೆಲ್ಲೆಡೆ ಭಾರೀ ಮಳೆ ಆಗುತ್ತಿದೆ. ಅದರಂತೆ ಮಂಗಳೂರಿನಲ್ಲೂ ಮಳೆ ಆರ್ಭಟ ಜೋರಾಗಿದ್ದು, ಪಂಪ್ವೆಲ್ ವೃತ್ತವು ಮತ್ತೆ ಮುಳುಗಡೆಯಾಗಿದೆ.
ರಸ್ತೆಯಲ್ಲೇ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿರುವ ಹಿನ್ನೆಲೆ ಸಂಪೂರ್ಣ ರಸ್ತೆ ಸಂಚಾರ ಬಂದ್ ಆಗಿದೆ. ಇದೀಗ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮಳೆ ನೀರಿನಲ್ಲೇ ಸಂಚರಿಸಲು ಯತ್ನಿಸಿದ ಖಾಸಗಿ ಬಸ್ಸೊಂದು ನಡುರಸ್ತೆಯಲ್ಲೇ ಕೆಟ್ಟು ನಿಂತಿದ್ದು, ನಂತರ ಸ್ಥಳೀಯರು ಬಸ್ನ್ನು ತಳ್ಳಿ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಸೃಷ್ಠಿಯಾಗಿದೆ. ಇನ್ನೂ ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಮುಂಗಾರಿನ ಜೊತೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಆದ ವೈಪರೀತ್ಯದ ತೀವ್ರತೆಯಿಂದ ಕರ್ನಾಟಕದ ಕೆಲವು ಜಿಲ್ಲೆಗಳಲ್ಲೂ ಭಾರೀ ಮಳೆಯಾಗುತ್ತಿದೆ.