ಗದಗ:– ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದ್ದು, ಭಾರೀ ಮಳೆಯಿಂದ ರಾಜ್ಯದ ಹಲವು ಜಿಲ್ಲೆಯಲ್ಲಿ ಸಾಕಷ್ಟು ಅವಾಂತರವೇ ಸೃಷ್ಟಿ ಆಗಿದೆ. ಅದರಂತೆ ಗದಗ ಜಿಲ್ಲೆಯಲ್ಲಿಯೂ ಭಾರೀ ಮಳೆ ಆಗುತ್ತಿದ್ದು, ಧಾರಾಕಾರ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಇನ್ನೂ ಉಕ್ಕಿ ಹರಿಯುವ ಹಳ್ಳದಿಂದ ಶಾಲೆಯಿಂದ ತಮ್ಮ ಗ್ರಾಮಕ್ಕೆ ಮರಳಲು ಮಕ್ಕಳು ಪರದಾಡುತ್ತಿದ್ದು, ವಿಶೇಷ ಕಾಳಜಿ ವಹಿಸಿ ಮಕ್ಕಳನ್ನು ಗ್ರಾಮಸ್ಥರು ಪಾರು ಮಾಡಿದ್ದಾರೆ. ಎಸ್, ಇವೆಲ್ಲಾ ದೃಶ್ಯ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದ್ಯಾಮುಣಶಿ ಗ್ರಾಮದ ಬಳಿ ಜರುಗಿದೆ.
ಭಾರೀ ಮಳೆಯಿಂದ ಊರು ಮುಂದಿನ ಹಳ್ಳ ತುಂಬಿ ಹರಿಯುತ್ತಿದ್ದು, ಹೀಗಾಗಿ ಮಕ್ಕಳನ್ನು ಹಳ್ಳದ ದಡದಲ್ಲೇ ಬಿಟ್ಟು ಬಸ್ ಹೋಗಿದೆ. ಇದರಿಂದ ಸೂಡಿ ಗ್ರಾಮದಲ್ಲಿ ಶಾಲೆ ಮುಗಿಸಿ ಗ್ರಾಮಕ್ಕೆ ಆಗಮಿಸುತ್ತಿದ್ದ ವೇಳೆ ಮಕ್ಕಳು ಹಳ್ಳದಲ್ಲಿ ಸಿಲುಕಿದ್ದಾರೆ. ಮಕ್ಕಳ ಕೂಗಾಟ, ಚೀರಾಟ ಕೇಳಿದ ಗ್ರಾಮಸ್ಥರು, ತಾವೇ ಖುದ್ದಾಗಿ ಬಂದು ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಹಳ್ಳ ದಾಟಿಸಿ ಗ್ರಾಮಕ್ಕೆ ಕರೆದೊಯ್ದಿದ್ದಾರೆ.
ಇನ್ನೂ ಗದಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಭಾರೀ ಅವಾಂತರವೇ ಸೃಷ್ಟಿ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.