ಹಾಸನ:– ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಸಕಲೇಶಪುರದಲ್ಲಿ ಭೂಕುಸಿತ ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಕಳೆದೊಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಲ್ಲಿನ ಜನತೆ ಹೈರಾಣಾಗಿದ್ದಾರೆ. ಸಕಲೇಶಪುರದಲ್ಲಂತೂ ಮಳೆಯ ಅಬ್ಬರ ಹೇಳತೀರದಾಗಿದೆ. ಸತತ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಹೆಗ್ಗದ್ದೆ ಬಳಿ ನಿರಂತರವಾಗಿ ಭೂಕುಸಿತ ಉಂಟಾಗುತ್ತಿದೆ. ರಸ್ತೆಗೆ ಭಾರೀ ಪ್ರಮಾಣದ ಮಣ್ಣು ಕುಸಿದಿದ್ದು ಸಂಚಾರಕ್ಕೆ ಅಡ್ಡಿಪಡಿಸಿದೆ. ಹಾಗೇ ಭೂಕುಸಿತದಿಂದ ಗುಡ್ಡದ ಮೇಲಿನ ಚರ್ಚ್ ಹಾಗೂ ಫಾದರ್ ವಾಸದ ಮನೆ ಕುಸಿಯುವ ಭೀತಿ ಉಂಟಾಗಿದೆ.
ಸಕಲೇಶಪುರ ಪಟ್ಟಣದ ಹೊರ ವಲಯದ ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದೆ. ಇದರಿಂದ ಮೇಲ್ಬಾಗದ ವಾಸದ ಮನೆಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಮತ್ತಷ್ಟು ಮಣ್ಣು ಕುಸಿದರೆ ವಾಸದ ಮನೆಗಳಿಗೆ ಹಾನಿಯಾಗುವ ಸಂಭವವಿದೆ. ನಿರಂತರ ಮಳೆಯಿಂದ ಶೀತ ಹೆಚ್ಚಾಗಿ ದೊಡ್ಡ ಬಂಡೆ ಕಲ್ಲಿನ ಜೊತೆ ಮಣ್ಣು ಕುಸಿತ ಉಂಟಾಗಿದೆ. ರಸ್ತೆಯ ಸುರಕ್ಷತೆಗಾಗಿ ನಿರ್ಮಿಸಲಾಗಿದ್ದ ತಡೆಗೋಡೆಗೂ ಹಾನಿ ಉಂಟಾಗಿದೆ.
ಒಟ್ಟಾರೆ ರಾಜ್ಯದ ಎಲ್ಲೆಡೆ ಮಳೆ ಅಬ್ಬರ ಜೋರಾಗಿದೆ. ಅದರಲ್ಲೂ ಹಾಸನದ ಮಲೆನಾಡು ಭಾಗದಲ್ಲಂತು ಕಳೆದೊಂದು ವಾರದಿಂದ ಮಳೆ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.