ದೇವರಾಜ್ ನಿಲ್ದಾಣವನ್ನು ಸ್ವಚ್ಛವಾಗಿಡಲು ಸಹಕರಿಸಿ

0
ksrtc
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಜಿಲ್ಲೆಯ ದೊಡ್ಡ ಬಸ್ ನಿಲ್ದಾಣವಾಗಿರುವ ನರೇಗಲ್ಲ ಬಸ್‌ನಿಲ್ದಾಣವು ಹಲವಾರು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವುದನ್ನು ಮಾಧ್ಯಮದ ಪ್ರತಿನಿಧಿಗಳು ಮತ್ತು ಸಾರ್ವಜನಿಕರು ನಮ್ಮ ಗಮನಕ್ಕೆ ತಂದಿದ್ದಾರೆ. ಅವುಗಳಿಗೆ ಶೀಘ್ರವೇ ಕಾಯಕಲ್ಪ ನೀಡಲಾಗುವುದು ಎಂದು ಗದಗ ಜಿಲ್ಲಾ ಕರ್ನಾಟಕ ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಕ ದೇವರಾಜ್ ಹೇಳಿದರು.

Advertisement

ಗುರುವಾರ ಬೆಳಿಗ್ಗೆ ನರೇಗಲ್ಲ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಅವರು, ಕಸವನ್ನು ಅಲ್ಲಲ್ಲೇ ಗುಂಪುಗೂಡಿಸಿ ಬೆಂಕಿ ಹಚ್ಚಿದ್ದನ್ನು ಕಂಡು ಕೆಂಡಾಮಂಡಲವಾದರು. ಇದರಿಂದ ಪ್ರಯಾಣಿಕರ ಆರೋಗ್ಯಕ್ಕೆ ಮಾರಕವಾಗುವುದೆಂದು ಸಾರಿಗೆ ನಿಯಂತ್ರಕರನ್ನು ಎಚ್ಚರಿಸಿದ ಅವರು, ಇನ್ನೆಂದಿಗೂ ಈ ರೀತಿ ಮಾಡಬೇಡಿ ಎಂದು ಹೇಳಿದರು.

ಶೌಚಾಲಯದ ವ್ಯವಸ್ಥೆಯನ್ನು ಖುದ್ದಾಗಿ ಪರಿಶೀಲಿಸಿದ ಡಿಸಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಶೌಚಾಲಯ ಸಿಬ್ಬಂದಿಗೆ ತಿಳಿಸಿ ಅದನ್ನು ಸರಿಪಡಿಸಲು ಹೇಳಿದರಲ್ಲದೆ, ಇಂಜಿನಿಯರ್ ಮಧು ಅವರಿಗೆ ಈ ಎಲ್ಲ ಕೆಲಸಗಳ ಕಡೆಗೆ ಹೆಚ್ಚಿನ ಗಮನ ನೀಡಬೇಕೆಂದು ಆದೇಶಿಸಿದರು.

ಮುಖಂಡ ನಿಂಗಪ್ಪ ಲಕ್ಕನಗೌಡ್ರ ಮಾತನಾಡಿ, ಈಗ ಕೆಲವು ದಿನಗಳಿಂದ ಗಜೇಂದ್ರಗಡ-ಗದಗ ತಡೆ ರಹಿತ ಬಸ್‌ನ್ನು ಓಡಿಸುತ್ತಿದ್ದಿರಿ. ಮಧ್ಯದಲ್ಲಿ ನರೇಗಲ್ಲ ಒಂದು ದೊಡ್ಡ ಊರಾಗಿದೆ. ಇಲ್ಲಿಗೆ ಒಂದು ನಿಲುಗಡೆ ನೀಡಿ ಬಸ್ ಓಡಿಸಿ ಎಂದು ಸಲಹೆ ನೀಡಿದರು. ಈ ಕುರಿತು ಗಜೇಂದ್ರಗಡ ಘಟಕ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದೇವರಾಜ ಹೇಳಿದರು.

ಈ ಸಂದರ್ಭದಲ್ಲಿ ನರೇಗಲ್ಲ ಆಟೋ ಚಾಲಕರ ಸಂಘದ ಸದಸ್ಯರು ಅಧ್ಯಕ್ಷ ವಿಷ್ಣು ಜಕ್ಕಲಿಯವರ ನೇತೃತ್ವದಲ್ಲಿ ಬಸ್ ನಿಲ್ದಾಣದೊಳಗೆ ಒಂದು ಭಾಗದಲ್ಲಿ ನಮ್ಮ ಆಟೋಗಳನ್ನು ನಿಲ್ಲಿಸಲು ಆಟೋ ನಿಲ್ದಾಣದ ಅನುಕೂಲ ಮಾಡಿಕೊಡಬೇಕೆಂದು ಮನವಿ ಅರ್ಪಿಸಿದರು. ಈ ಸಂದರ್ಭದಲ್ಲಿ ಜಾಖೀರ ಬುಡ್ಡಾ ಗದಗ, ಹುಚ್ಚಪ್ಪ ಬೆಟಗೇರಿ, ಅಬ್ದುಲ್ ರೆಹೆಮಾನ್ ಲಕ್ಕುಂಡಿ, ಮಹಮ್ಮದ್ ನಶೇಖಾನ್, ಮಂಜುನಾಥ ರಾಠೋಡ, ಪ್ರಕಾಶ ಸಂಕನೂರ, ಹುಸೇನ್ ಅತ್ತಾರ, ರಾಮು ಮಣ್ಣೊಡ್ಡರ ಇನ್ನೂ ಮುಂತಾದವರಿದ್ದರು.
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೈಕಲ್, ಮೋಟರ್ ಸೈಕಲ್ ಮತ್ತು ಕಾರ್ ಸ್ಟ್ಯಾಂಡ್ ಗಳಿಗೆ ಟೆಂಡರ್ ಕೆರಯಲು ಅವಕಾಶವಿಲ್ಲ. ನೀತಿ ಸಂಹಿತೆ ತೆರವಾದ ತಕ್ಷಣ ಇವುಗಳಿಗೆ ಟೆಂಡರ್ ಕರೆಯಲಾಗುವುದೆಂದು ಡಿಸಿ ದೇವರಾಜ್ ಉತ್ತರಿಸಿದರು.

ಪ್ರಯಾಣಿಕರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಪ.ಪಂ ಮುಖ್ಯಾಧಿಕಾರಿ ಭೂಷಣ್ ಅವರನ್ನು ಭೇಟಿಯಾಗಿ ಚರ್ಚಿಸಿದರು.

ಪ್ರಯಾಣಿಕರಿಗೆ ಎಲ್ಲ ಅನುಕೂಲತೆಯನ್ನು ಒದಗಿಸುವುದು ನಮ್ಮ ಇಲಾಖೆಯ ಮೊದಲ ಆದ್ಯತೆಯಾಗಿದೆ. ಅನುಕೂಲತೆ ಬಯಸುವ ಪ್ರಯಾಣಿಕರೂ ಸಹ ಬಸ್‌ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಇಲಾಖೆಯವರೊಂದಿಗೆ ಸಹಕರಿಸಬೇಕು. ನಳಗಳನ್ನು ಹಾಳುಗೆಡವಬಾರದು. ಎಲ್ಲೆಂದರಲ್ಲಿ ಕಸ ಬೀಸಾಡುವುದನ್ನು ಬಿಟ್ಟು, ನಿಗದಿತ ಜಾಗೆಯಲ್ಲಿ ಕಸ ಹಾಕಿ ನಿಮ್ಮೂರಿನ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಹಕರಿಸಿ. ಸಾರಿಗೆ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ, ಪ್ರಯಾಣಿಕರು ಸಿಬ್ಬಂದಿಗಳೊಂದಿಗೆ ಪರಸ್ಪರ ಸೌಜನ್ಯ ಮತ್ತು ಗೌರವದಿಂದ ವರ್ತಿಸಿದಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ
– ದೇವರಾಜ್.
ವಿಭಾಗೀಯ ಸಾರಿಗೆ ನಿಯಂತ್ರಕ.


Spread the love

LEAVE A REPLY

Please enter your comment!
Please enter your name here