ವಿಜಯಸಾಕ್ಷಿ ಸುದ್ದಿ, ಗದಗ : ಉತ್ತರ ಕರ್ನಾಟಕದ ಸಸ್ಯಕಾಶಿ ಕಪ್ಪತಗುಡ್ಡದ ವನ್ಯಜೀವಿ ಧಾಮದ ಗಡಿಯಿಂದ 1 ಕಿ.ಮೀ. ವ್ಯಾಪ್ತಿಯಲ್ಲಿನಕಲ್ಲು ಗಣಿಗಾರಿಕೆಗೆ ಹೈಕೋರ್ಟ್ ತಡೆ ನೀಡಿದ್ದು, ಕಪ್ಪತಗುಡ್ಡಕ್ಕೆ ಅಂಟಿದ್ದ ಗಣಿ ಕಂಟಕ ಸದ್ಯಕ್ಕೆ ದೂರವಾದಂತಾಗಿದೆ.
ವನ್ಯಜೀವಿ ಧಾಮದ ಗಡಿಯಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು, ಮರಳು ಗಣಿಗಾರಿಕೆ ನಿಷೇಧಿಸಿ ಸರಕಾರ ಕೈಗೊಂಡ ನಿರ್ಧಾರವನ್ನು ಪ್ರಶ್ನಿಟೀ ಹಿಂದೆ ಸ್ಟೋನ್ ಕ್ರಶರ್ ಮಾಲೀಕರು, ಗಣಿ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ಸರಕಾರದ ನಿರ್ಧಾರವನ್ನು ಎತ್ತಿ ಹಿಡಿದಿದ್ದು, ಯಾವುದೇ ಕಾರಣಕ್ಕೂ ವನ್ಯಜೀವಿ ಧಾಮದಿಂದ 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಬಾರದು ಎಂದು ಮಹತ್ವದ ತೀರ್ಪು ನೀಡಿದೆ.
ಒಟ್ಟು 32,346 ಹೆಕ್ಟೇರ್ ವ್ಯಾಪ್ತಿ ಹೊಂದಿರುವ ಕಪ್ಪತಗುಡ್ಡವನ್ನು ನಾಲ್ಕು ಬ್ಲಾಕ್ಗಳಲ್ಲಿ ವಿಂಗಡಿಸಿ, ಅದರಲ್ಲಿ 24,415 ಹೆಕ್ಟೇರ್ ಪ್ರದೇಶವನ್ನು ವನ್ಯಜೀವಿ ಧಾಮ ಎಂದು 2019ರ ಜನವರಿ 1ರಂದು ಘೋಷಿಸಲಾಯಿತು. ಈ ಬ್ಲಾಕ್ಗಳ ಪೈಕಿ 1319 ಹೆಕ್ಟೇರ್ ವ್ಯಾಪ್ತಿಯ 4ನೇ ಬ್ಲಾಕ್ ವ್ಯಾಪ್ತಿಯಲ್ಲಿ 38 ಜಲ್ಲಿ ಕ್ರಶರ್ಗಳಿದ್ದವು. ಸದರಿ ಕ್ರಶರ್ಗಳ ರಕ್ಷಣೆಗಾಗಿ ಇಡೀ ಬ್ಲಾಕ್ನ್ನು ವನ್ಯಜೀವಿ ಧಾಮ ವ್ಯಾಪ್ತಿಯಿಂದ ಕೈಬಿಡಬೇಕು ಎಂದು ಅಂದಿನ ಹಾವೇರಿ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಅಷ್ಟೇ ಅಲ್ಲದೆ, ಹಾವೇರಿ ಜಿಲ್ಲೆಯ ಬ್ಯಾಡಗಿಯ ಅಂದಿನ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು 4ನೇ ಬ್ಲಾಕ್ ಮಾತ್ರವಲ್ಲದೆ, 3ನೇ ಬ್ಲಾಕ್ನ್ನೂ ಸಹ ವನ್ಯಜೀವಿ ಧಾಮ ಅಧಿಸೂಚನೆಯಿಂದ ಹೊರಗಿಡುವಂತೆ ಅರಣ್ಯ ಸಚಿವರಿಗೆ ಪತ್ರ ಬರೆದಿದ್ದು, ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಸ್ತುತ ವನ್ಯಜೀವಿ ಧಾಮದ 4ನೇ ಬ್ಲಾಕ್ನ್ನು ಅಧಿಸೂಚನೆಯಿಂದ ಹೊರಗಿಡುವ ಪ್ರಯತ್ನ ಮತ್ತು 1 ಕಿ.ಮೀ. ವ್ಯಾಪ್ತಿಯಲ್ಲಿ ಕಲ್ಲು, ಮಣ್ಣು ಗಣಿಗಾರಿಕೆಗೆ ತಡೆಯುವ ಸರಕಾರದ ನಿರ್ಧಾರವನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಕಪ್ಪತಗುಡ್ಡದ ಮೇಲಿನ ಗಣಿ ಕಂಟಕ ತಾತ್ಕಾಲಿಕವಾಗಿ ತಪ್ಪಿದಂತಾಗಿದೆ.
ಪ್ರಭಾವಿಗಳ ಮುಂದಿನ ನಡೆಯೇನು?
ಕಪ್ಪತಗುಡ್ಡ ವನ್ಯಜೀವಿ ಧಾಮದ 4ನೇ ಬ್ಲಾಕ್ ವ್ಯಾಪ್ತಿಯಲ್ಲಿ ಬರುವ ಸ್ಟೋನ್ ಕ್ರಶರ್ಗಳ ಪೈಕಿ ಕೆಲವು ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳ ಒಡೆತನದಲ್ಲಿವೆ. ಹೀಗಿದ್ದರೂ, ಹೈಕೋರ್ಟ್ ವನ್ಯಜೀವಿ ಧಾಮದ ಪರ ತೀರ್ಪು ನೀಡಿದ್ದು, ಗಣಿ ಕಂಪನಿಗಳು, ಸ್ಟೋನ್ ಕ್ರಶರ್ ಮಾಲೀಕರ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಹೈಕೋರ್ಟ್ನ ಈ ತೀರ್ಪನ್ನು ಸ್ವಾಗತಿಸಿರುವ ಕಪ್ಪತಗುಡ್ಡ ನಂದಿವೇರಿ ಸಂಸ್ಥಾನಮಠದ ಪೂಜ್ಯ ಶಿವಕುಮಾರ ಸ್ವಾಮೀಜಿಗಳು, ಕಪ್ಪತಗುಡ್ಡದ ಮೇಲಿನ ಗಣಿ ಕಂಟಕ ದೂರವಾಗಿರುವುದು ಸಂತಸ ತಂದಿದೆ. ಇಡೀ ಜಿಲ್ಲೆಗೆ ಶುದ್ಧ ಪ್ರಾಣವಾಯುವನ್ನು ನೀಡುತ್ತಿರುವ ಕಪ್ಪತಗುಡ್ಡ ಎಂದೆಂದಿಗೂ ಗಣಿಗಾರಿಕೆಯಿಂದ ದೂರವೇ ಉಳಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



