ಬೆಂಗಳೂರು: ತನಿಖೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಅವಹೇಳನ ಮಾಡಬಾರದು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆಯಲ್ಲಿ ಬಿಜೆಪಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ.
ತನಿಖೆ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರದ ಅವಹೇಳನ ಮಾಡಬಾರದು. ಅಪಪ್ರಚಾರ ಮಾಡಬಾರದು ಎಂಬುದು ಬಿಜೆಪಿ ನಿಲುವು ಎಂದರು. ಇನ್ನೂ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದು ನಾವು ಹೇಳಿದ್ದು, ಉಪ ಮುಖ್ಯಮಂತ್ರಿಗಳೂ ಇದನ್ನು ಒಪ್ಪಿಕೊಂಡಿದ್ದಾರೆ. ಇದರ ಹಿಂದಿನ ಶಕ್ತಿಗಳನ್ನು ಎಸ್ಐಟಿ ಪತ್ತೆ ಹಚ್ಚುವ ವಿಶ್ವಾಸ ನಮಗಿದೆ ಎಂದು ನುಡಿದರು.
ಇದರಲ್ಲಿ ಒಬ್ಬ ಮುಸುಕುಧಾರಿಯಲ್ಲ; ಹತ್ತಾರು ಜನರು ಮುಸುಕುಧಾರಿಗಳಾಗಿ ಕೆಲಸ ಮಾಡಿದ್ದಾರೆಂದು ನಾನು ಸದನದಲ್ಲೂ ಹೇಳಿದ್ದೆ ಎಂದು ತಿಳಿಸಿದರು. ಸುಳ್ಳು ಸುದ್ದಿ ಹರಡಿಸಿದವರು ಯಾರು? ಪಿತೂರಿ ಮಾಡಿದ್ದು ಯಾರು? – ಇವೆಲ್ಲವೂ ತನಿಖೆಯಿಂದ ಗೊತ್ತಾಗಬೇಕಿದೆ. ಆದಷ್ಟು ಬೇಗ, ತನಿಖೆಯಿಂದ ಇವೆಲ್ಲ ಹೊರಬರಲಿ ಎಂದು ಆಗ್ರಹಿಸಿದರು.