-
ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಶಾಸಕ ಕೆ. ನೇಮಿರಾಜ್ ನಾಯ್ಕ್
ವಿಜಯಸಾಕ್ಷಿ ಸುದ್ದಿ, ಹಗರಿಬೊಮ್ಮನಹಳ್ಳಿ: ಹಿಂದೂ ಧರ್ಮವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ಮಾತೃ ಸ್ಥಾನದಲ್ಲಿದೆ. ಫೆಬ್ರವರಿ 7ರಂದು ಪಟ್ಟಣದಲ್ಲಿ ನಡೆಯಲಿರುವ ಸಮಾವೇಶಕ್ಕೆ ಸಹಸ್ರಾರು ಜನ ಸೇರಬೇಕು. ಹಿಂದೂಗಳ ಶಕ್ತಿ ಎಷ್ಟಿದೆ ಎಂಬುದನ್ನು ಪ್ರದರ್ಶಿಸಬೇಕಿದೆ ಎಂದು ಶಾಸಕ ಕೆ. ನೇಮಿರಾಜ್ ನಾಯ್ಕ್ ಹೇಳಿದರು.
ಅವರು ಪಟ್ಟಣದ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಮಾತನಾಡಿ, ಹಿಂದೂಗಳ ದೌರ್ಬಲ್ಯಗಳನ್ನು ಬಳಸಿಕೊಂಡು ಈ ದೇಶವನ್ನು ಮೊಘಲರು ಸುಮಾರು 800 ವರ್ಷಗಳ ಕಾಲ ಹಾಗೂ ಬ್ರಿಟಿಷರು 250 ವರ್ಷಗಳ ಕಾಲ ಆಳಿದ್ದಾರೆ. ಈಗಲೂ ಹಿಂದೂಗಳಾದ ನಾವೆಲ್ಲರೂ ಎಚ್ಚೆತ್ತುಕೊಳ್ಳದೇ ಹೋದರೆ ಹಿಂದೂ ಧರ್ಮದ ನಾಶ ನಿಶ್ಚಿತ. ಅಲ್ಲದೇ ನಮ್ಮ ರಾಷ್ಟ್ರದಲ್ಲಿ ಹಿಂದೂ ಧರ್ಮವನ್ನು ಉಚ್ಚಸ್ಥಿತಿಗೆ ಕೊಂಡೊಯ್ದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ ಮಾತನಾಡಿ, ನಾವೆಲ್ಲರೂ ಸರ್ವ ಸಮಾಜಗಳನ್ನು ಪ್ರೀತಿಸಬೇಕು. ಇಲ್ಲಿ ರಾಜಕೀಯ ಸಲ್ಲದು, ನಾವೆಲ್ಲರೂ ಪಕ್ಷಾತೀತ ಹಾಗೂ ಜಾತ್ಯತೀತರಾಗಿರಬೇಕು ಎಂದರು.
ಬಸವರಾಜ್ ರೆಡ್ಡಿ, ಬಣಜಿಗ ಸಮಾಜದ ಮುಖಂಡ ರಾಚೋಟೆಪ್ಪ ಹಾಗೂ ಕಾಂಗ್ರೆಸ್ ಮುಖಂಡ ಹೆಗ್ಡಾಳ್ ರಾಮಣ್ಣ ಮಾತನಾಡಿದರು. ಮಾಧವಿ ಚಿದ್ರಿ ಪ್ರಾರ್ಥಿಸಿದರು. ಕನ್ನಿಹಳ್ಳಿ ಚಂದ್ರಶೇಖರ್ ಸ್ವಾಗತಿಸಿದರು. ಪುರಸಭೆ ಸದಸ್ಯ ಜೋಗಿ ಹನುಮಂತಪ್ಪ ನಿರೂಪಿಸಿದರು. ಕಾರ್ಯಕ್ರಮದ ಆಶೀರ್ವಚನವನ್ನು ನಂದಿಪುರ ಕ್ಷೇತ್ರದ ಡಾ. ಮಹೇಶ್ವರ ಸ್ವಾಮಿಗಳು ನೀಡಿದರು. ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮಿಗಳು ಇದ್ದರು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಅವಿನಾಶ್ ಜಾಧವ, ಸಂಚಿ ಶಿವಕುಮಾರ, ಗುರುಬಸವರಾಜ, ಸುಭಾಷ್ ಚಂದ್ರ, ಸಂದೀಪ್ ಶಿವಮೊಗ್ಗ, ಮಹಿಳಾ ಕಾರ್ಯಕರ್ತರು, ವಿವಿಧ ಸಮಾಜಗಳ ಮುಖಂಡರು, ಅಧ್ಯಕ್ಷರು ಉಪಸ್ಥಿತರಿದ್ದರು. ಹಿಂದೂ ಸಮಾವೇಶದ ರೂಪುರೇಷೆಗಳು ಹೇಗಿರಬೇಕೆಂದು, ಪುರಸಭೆ ಸದಸ್ಯರೂ ಆದ ಕಮಲಮ್ಮ ಶಿವಮೊಗ್ಗ, ಚಿಂತರಪಳ್ಳಿ ಬಿಜೆಪಿ ಮುಖಂಡ ಜಿ.ಎಸ್. ಬಣಕಾರ ಹಾಗೂ ಹೆಗ್ಡಾಳ ಶ್ರೀನಿವಾಸ್ ಸಲಹೆ-ಸೂಚನೆಗಳನ್ನು ನೀಡಿದರು.
ಪ್ರಾಸ್ತಾವಿಕವಾಗಿ ಡಾ. ಬಂಡ್ರಿ ವಿಶ್ವನಾಥ ಮಾತನಾಡಿ, ಸಂಸ್ಕಾರ, ಸತ್ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದೇ ಹಿಂದೂ ಸಮಾವೇಶದ ಉದ್ದೇಶವಾಗಿದೆ. ನಮ್ಮಲ್ಲಿ ಅಸಂಖ್ಯಾತ ಜಾತಿ, ಭಾಷೆಗಳಿದ್ದು, ಅವೆಲ್ಲವುಗಳನ್ನು ಒಂದುಗೂಡಿಸಿ, ಹಿಂದೂ ಧರ್ಮವನ್ನು ಬೆಳೆಸಬೇಕಿದೆ. ಇದೊಂದು ಪಕ್ಷಾತೀತ, ಜಾತ್ಯತೀತ ಕಾರ್ಯಕ್ರಮವಾಗಿದ್ದು, ಹಿಂದೂ ಪರಂಪರೆಯನ್ನು ಉಳಿಸಬೇಕಾಗಿದೆ ಎಂದರು.



