ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಮ್ಮೂರಿನ ಹಿರೇಮಠದ ಜಾತ್ರೆಯು ನಮ್ಮೆಲ್ಲರಿಗೂ ಸಂಸ್ಕಾರ ಕಲಿಸುವ ಜಾತ್ರೆಯಾಗಿದೆ. ಪ್ರತಿ ವರ್ಷದ ಕಾರ್ತಿಕ ಮಾಸದಲ್ಲಿ ಷ. ಬ್ರ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಏರ್ಪಡಿಸುವ ಈ ಜಾತ್ರೆಯಲ್ಲಿ ಅವರಿಂದ ಪ್ರವಚನ ಕೇಳುವುದರ ಜೊತೆಗೆ ಅನೇಕ ವಿದ್ವನ್ಮಣಿಗಳಿಂದ ವಿಚಾರ ಪ್ರಚೋದಕ ಮಾತುಗಳನ್ನು ಕೇಳಿ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತೇವೆ ಎಂದು ನರೇಗಲ್ಲ ಬಣಜಿಗರ ಸಂಘದ ಅಧ್ಯಕ್ಷ ಶಿವಯೋಗಿ ಜಕ್ಕಲಿ ಹೇಳಿದರು.
ಹಿರೇಮಠದಲ್ಲಿ ನಡೆದಿರುವ ಜಾತ್ರಾಮಹೋತ್ಸವದ 3ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀಗಳವರು ನಮಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ನಮ್ಮೆಲ್ಲರ ಕಾಳಜಿಯನ್ನು ಮಾಡುತ್ತಿದ್ದಾರೆ. ಎಲ್ಲರೂ ಸುಖ, ಸಂತೋಷ, ನೆಮ್ಮದಿಯಿಂದ ಬದುಕಬೇಕೆಂಬುದು ಅವರ ಆಸೆಯಾಗಿದೆ. ಅದಕ್ಕಾಗಿ ನೀವೂ ಸಂಸ್ಕಾರವಂತರಾಗಿ ಮತ್ತು ನಿಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿರಿ ಎಂದು ಯಾವಾಗಲೂ ಹೇಳುತ್ತಾರೆ. ಇದು ನಮಗೆಲ್ಲರಿಗೂ ದಾರಿದೀಪವಾಗಿದೆ ಎಂದರು.
ಗಣ್ಯ ವರ್ತಕ ಮುತ್ತಣ್ಣ ಪಲ್ಲೇದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಆಶೀರ್ವಚನ ನೀಡಿದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು, ವಚನ ಸಾಹಿತ್ಯ ಹೇಗೆ ಶರಣರಿಂದ ಶ್ರೀಮಂತವಾಗಿದೆಯೋ ಹಾಗೆಯೇ ದಾಸರಿಂದ ದಾಸ ಸಾಹಿತ್ಯವೂ ಶ್ರೀಮಂತವಾಗಿದೆ. ಪುರಂದರದಾಸರು, ಕನಕದಾಸರು, ವೆಂಕಟವಿಠ್ಠಲ ದಾಸರು, ಪ್ರಸನ್ನ ವೆಂಕಟದಾಸರು ಹೀಗೆ ಅನೇಕ ದಾಸರು ದಾಸ ಪರಂಪರೆಯಲ್ಲಿ ಬರುತ್ತಾರೆ. ಅವರು ಕಟ್ಟಿಕೊಟ್ಟಿರುವ ಕೀರ್ತನೆಗಳು, ಕಥೆಗಳು ಮುಂತಾದವುಗಳು ನಮ್ಮ ಬಾಳಿಗೆ ದಾರಿ ದೀಪವಾಗಿವೆ ಎಂದರು.
ವೇದಿಕೆಯ ಮೇಲೆ ಗುರುಪಾದಪ್ಪ ಬೆಲ್ಲದ, ಶಶಿಧರ ಓದುಸುಮಠ, ರಮೇಶ ಕಳಕಣ್ಣವರ, ಬಸಪ್ಪ ಮಡಿವಾಳರ ಮುಂತಾದವರಿದ್ದರು. ಶಿಕ್ಷಕ ಸುರೇಶ ಹಳ್ಳಿಕೇರಿ ಸ್ವಾಗತಿಸಿದರು. ನರೇಗಲ್ಲದ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಶ್ರೀಗಳಿಗೆ ಗೌರವ ಸನ್ಮಾನವನ್ನು ನೀಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್. ಕಳಕಣ್ಣವರ ನಿರೂಪಿಸಿದರು.


