ಚಿಕ್ಕಮಗಳೂರು:- ಕರ್ನಾಟಕದಲ್ಲಿ ಇಂದು ಐತಿಹಾಸಿಕ ಬೆಳವಣಿಗೆ ನಡೆಯಲಿದ್ದು, 6 ನಕ್ಸಲರು ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ. ಅಡವಿಯಲ್ಲಿ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಇದೀಗ ಶಾಂತಿ ಮಂತ್ರ ಪಠಿಸಿದ್ದಾರೆ. 4 ದಶಕಗಳ ಕಾಲ ಸದ್ದು ಮಾಡಿದ್ದ ನಕ್ಸಲ್ ಸಂಸ್ಕೃತಿಯಿಂದ ಕರ್ನಾಟಕ ಮುಕ್ತ ಆಗುವ ಮುನ್ಸೂಚನೆ ಸಿಕ್ಕಿದೆ.
ಇಂದು ಬೆಳಗ್ಗೆ 8ರಿಂದ 9 ಗಂಟೆಯೊಳಗೆ ನಕ್ಸಲರು ಶರಣಾಗತಿಗೆ ಸಮಯ ನಿಗದಿಯಾಗಿದೆ. ಬಂದೂಕು ಸಂಸ್ಕೃತಿ ಮೂಲಕ ನ್ಯಾಯ ಪಡೆಯಲು ಹೊರಟಿದ್ದ ನಕ್ಸಲರು ಹ್ಯಾಂಡ್ಸಪ್ ಮಾಡಿದ್ದು ಸಮಾಜದ ಮುಖ್ಯವಾಹಿನಿ ಬರಲು ಬಯಸಿದ್ದಾರೆ.
ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ
ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿ ಆಗಲಿದ್ದಾರೆ. ಬಂದೂಕಿನ ಮೂಲಕ ಮಾತನಾಡುತ್ತಿದ್ದ ಆದರ್ಶವಾದಿಗಳಿಗೆ ಕೊನೆಗೂ ಪಾಪಪ್ರಜ್ಞೆ ಕಾಡಿದ್ದು, ಆಯುಧ ಕೆಳಗಿಳಿಸುತ್ತಿದ್ದಾರೆ. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿ ಪ್ರಕ್ರಿಯೆಗಳು ನಡೆಯಲಿವೆ.