ವಿಜಯಸಾಕ್ಷಿ ಸುದ್ದಿ, ಗದಗ : ಯುವಜನಾಂಗ ಮಾನಸಿಕ, ಸಾಮಾಜಿಕ, ದೈಹಿಕವಾಗಿ ಆರೋಗ್ಯವಂತರಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಡಾ.ಅರುಂಧತಿ ಕೆ ಹೇಳಿದರು.
ನಗರದ ಡಾ. ಡಿ.ಸಿ. ಪಾವಟೆ ಶಿಕ್ಷಣ ಮಾಹಾವಿದಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲೆಯ ರೆಡ್ ರಿಬ್ಬನ್ ಕಾಲೇಜುಗಳು ಮತ್ತು ಜಿಲ್ಲೆಯ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳು ಹಾಗೂ ಡಾ. ಡಿ.ಸಿ. ಪಾವಟೆ ಶಿಕ್ಷಣ ಮಾಹಾವಿದಾಲಯ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಯುವ ದಿನ ಹಾಗೂ ತೀವ್ರತರ ಹೆಚ್.ಐ.ವಿ. ಅರಿವಿನ ಮಾಸಾಚರಣೆ ಉದ್ಘಾಟಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಹೆಚ್.ಐ.ವಿ. ಏಡ್ಸ್ ಅರಿವಿನ ಮಾಸಾಚರಣೆಯಲ್ಲಿ ರೋಗದ ಬಗ್ಗೆ ಮಾಹಿತಿ ತಿಳಿಯಬೇಕು. ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕು. ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಕಡಿಮೆಯಾಗಿದ್ದು, ಗುರು-ಹಿರಿಯರು, ತಂದೆ-ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮದ ತಂತ್ರಜ್ಞಾನಕ್ಕೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವಜನರು ತಮ್ಮ ಜವಾಬ್ದಾರಿಯನ್ನು ಅರಿತು ದೇಶದ ಒಳಿತಿಗೆ ಪೂರಕವಾದ ತೀರ್ಮಾನವನ್ನು ಕೈಗೊಂಡು ಸದೃಡವಾದ ದೇಶ ಕಟ್ಟುವಲ್ಲಿ ಕೈ ಜೋಡಿಸಬೇಕೆಂದು ತಿಳಿಸಿದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ಅಂತಾರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸಿ, ಜಾತಿ, ಧರ್ಮ, ಲಿಂಗ ಗುಂಪು ಆಧಾರಿತ ಸವಾಲುಗಳನ್ನು ಎದುರಿಸಿ ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರು ಯುವಕರ ಕಣ್ಮಣಿಯಾಗಿದ್ದು, ಅವರ ಪ್ರೇರಣೆಯಂತೆ ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನಗಳ ಜೊತೆಗೆ ಆತ್ಮವಿಶ್ವಾಸವಿದ್ದರೆ ವಿಜಯಲಕ್ಷ್ಮಿ ಒಲಿಯುತ್ತಾಳೆಂದು ತಿಳಿಸಿದರು.
ಪ್ರಾಚಾರ್ಯರಾದ ಎಸ್.ಪಿ. ಗೌಳಿ ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಯೌವನವನ್ನು ಜೋಪಾನ ಮಾಡಿಕೊಳ್ಳಬೇಕು ಹಾಗೂ ಇಲಾಖೆಯ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಾಮಾಜಿಕಸೇವೆಗೆ ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಎನ್.ಎಸ್.ಎಸ್. ಅಧಿಕಾರಿ ಪ್ರೊ. ಎಮ್.ಎಮ್. ನದಾಫ್, ರೆಡ್ ಕ್ರಾಸ್ ಮುಖ್ಯಸ್ಥೆ ಕೆ.ಬಿ. ಸಂಕನಗೌಡರ ಹಾಗೂ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ವರ್ಗ ಹಾಜರಿದ್ದರು. ಕಾವೇರಿ ಬಡಿಗೇರ ಪ್ರಾರ್ಥಿಸಿದರು. ಪವಿತ್ರಾ ಹುಬ್ಬಳ್ಳಿ ಸ್ವಾಗತಿಸಿದರು. ಪೂಜಾ ಶೀಲವಂತರ ಕಾರ್ಯಕ್ರಮವನ್ನು ನಿರೂಪಿಸಿದರು. ಭೀಮಪ್ಪ ಅಣ್ಣಿಗೇರಿ ವಂದಿಸಿದರು.
ಅಂತಾರಾಷ್ಟ್ರೀಯ ಯುವದಿನಾಚರಣೆ ನಿಮಿತ್ತ ಹೆಚ್.ಐ.ವಿ ಏಡ್ಸ್ ಮತ್ತು ರಕ್ತದಾನದ ಕುರಿತು ಇ-ಕ್ವಿಜ್ ಸ್ಪರ್ಧೆಯಲ್ಲಿ ಪ್ರತಿಭಾ ರಾಬಜ್ಜನವರ ಹಾಗೂ ಮಂಜುಳಾ ಪರಾಪೂರ ಪ್ರಥಮ, ಆಫ್ರೀನ್ ಹೊಸಳ್ಳಿ, ಮೀನಾಕ್ಷಿ ಹೊಸಕೇರಿ ಹಾಗೂ ಸಂಕಲ್ಪಿತಾ ಕೋಲ್ಕರ ದ್ವಿತೀಯ, ಪ್ರಮೋದ ಕಪ್ಲಿ ಹಾಗೂ ಕ್ಯಾದಗಿಹಳ್ಳಿ ಕೋಟೆಪ್ಪ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.