ನವದೆಹಲಿ: ಭಾರತೀಯ ಹಾಕಿ ತಂಡದ ಸಾಂಪ್ರದಾಯಿಕ ನೀಲಿ ಜೆರ್ಸಿಯನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿರುವ ಹಾಕಿ ಇಂಡಿಯಾದ ನಿರ್ಧಾರಕ್ಕೆ ವಯನಾಡ್ ಸಂಸದೆ ಹಾಗೂ ಕಾಂಗ್ರೆಸ್ ನಾಯಕಿ Priyanka Gandhi Vadra ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ತಂಡದ ಸಮವಸ್ತ್ರ ಬದಲಾವಣೆ ದೇಶದ ಇತಿಹಾಸ ಮತ್ತು ಪರಂಪರೆಯನ್ನು ಬದಲಾಯಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, “ತಂಡದ ಜೆರ್ಸಿಯನ್ನೇ ಬದಲಾಯಿಸುವುದಾಗಲಿ ಅಥವಾ ಶಿಕ್ಷಣ ನೀತಿಯ ಮೂಲಕ ಇತಿಹಾಸವನ್ನು ತಿರುಚಲು ಪ್ರಯತ್ನಿಸುವುದಾಗಲಿ, ಇವೆಲ್ಲದರ ಬಗ್ಗೆ ದೇಶದ ಯುವಜನರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ನೋಡಿದ್ದೀರಿ. ಜಂತರ್ ಮಂತರ್ನಲ್ಲಿ ಯುವಕರು ವ್ಯಕ್ತಪಡಿಸಿದ ಅಭಿಪ್ರಾಯವೇ ದೇಶದ ನಿಜವಾದ ಧ್ವನಿ” ಎಂದು ಹೇಳಿದರು.
ಭಾರತದ ಸ್ವಾತಂತ್ರ್ಯ ಹೋರಾಟವು ಅಹಿಂಸೆ ಮತ್ತು ಸತ್ಯದ ತತ್ವಗಳ ಮೇಲೆ ನಿರ್ಮಾಣವಾಗಿತ್ತು ಎಂದು ಹೇಳಿದ ಅವರು, ಈ ಹೋರಾಟದಲ್ಲಿ Rashtriya Swayamsevak Sangh ಯಾವುದೇ ಪಾತ್ರ ವಹಿಸಿಲ್ಲ ಎಂದು ಆರೋಪಿಸಿದರು.
“ಮಹಾತ್ಮ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿತ್ತು. ಭಾರತದ ಆತ್ಮ ಅಹಿಂಸೆ, ಸತ್ಯ ಮತ್ತು ಸಹೋದರತ್ವದಲ್ಲಿದೆ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.
ದೇಶದಲ್ಲಿ ವಿಭಜನೆ, ಹಿಂಸಾಚಾರ ಮತ್ತು ದ್ವೇಷದ ವಾತಾವರಣ ಸೃಷ್ಟಿಸುವ ಯಾವುದೇ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದ ಅವರು, “ಪರಸ್ಪರ ಪ್ರೀತಿ, ಏಕತೆ ಮತ್ತು ಸಹೋದರತ್ವದಿಂದ ಕೂಡಿರುವ ಭಾರತದ ಆತ್ಮವನ್ನು ಯಾರಿಂದಲೂ ನಾಶ ಮಾಡಲು ಸಾಧ್ಯವಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಹಾಕಿ ಇಂಡಿಯಾ ಇತ್ತೀಚೆಗೆ ಮುಂಬರುವ ವಿಶ್ವಕಪ್ಗಾಗಿ ಭಾರತೀಯ ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದ್ದು, ಸಾಂಪ್ರದಾಯಿಕ ನೀಲಿ ಬಣ್ಣದ ಬದಲಿಗೆ ಕೇಸರಿ ಬಣ್ಣದ ವಿನ್ಯಾಸ ಪರಿಚಯಿಸಿರುವುದು ಚರ್ಚೆಗೆ ಕಾರಣವಾಗಿದೆ. Hockey India ಈ ಬದಲಾವಣೆಗೆ ತಾಂತ್ರಿಕ ಕಾರಣಗಳನ್ನು ನೀಡಿದ್ದು, ನೀಲಿ ಬಣ್ಣದ ಟರ್ಫ್ನಲ್ಲಿ ಆಟಗಾರರ ಗೋಚರತೆ ಹೆಚ್ಚಿಸಲು ಹೊಸ ಬಣ್ಣ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.



