ಮೈಸೂರು :-ಜಿಲ್ಲೆ ಹುಣಸೂರು ನಗರದ ಹೊಸ ಬಡಾವಣೆಯಲ್ಲಿ ಮನಕಲಕುವ ಘಟನೆ ನಡೆದಿದೆ.
ಮನೆ ನಿರ್ಮಾಣಕ್ಕಾಗಿ ತೆಗೆದುಕೊಂಡ ಸಾಲ ತೀರಿಸಲಾಗದೆ ಒತ್ತಡಕ್ಕೆ ಒಳಗಾದ ಸೈನಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ನಂಜಾಪುರದ ನಿವಾಸಿ ಎಂ. ಚಂದ್ರಶೇಖರ್ (35) ಎಂದು ಗುರುತಿಸಲಾಗಿದೆ.
ಅವರು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಭೂಸೇನೆ ಪ್ಯಾರಾಚೂಟ್ ರೆಜಿಮೆಂಟ್ನ ಸೈನಿಕರಾಗಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಹುಣಸೂರಿನ ಹೊಸ ಬಡಾವಣೆಯಲ್ಲಿ ಮನೆ ನಿರ್ಮಿಸಿದ ವೇಳೆ ಬ್ಯಾಂಕ್ ಹಾಗೂ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದರು. ಆದರೆ ಸಾಲ ತೀರಿಸಲು ಆಗದೇ ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಬಲಿಯಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಚಂದ್ರಶೇಖರ್ ಕಳೆದ 15 ವರ್ಷಗಳಿಂದ ಜಮ್ಮು ಕಾಶ್ಮೀರ, ಆಗ್ರಾ ಹಾಗೂ ಚೀನಾ ಗಡಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಸುಮಾರು ಒಂದು ತಿಂಗಳ ಹಿಂದೆ ರಜೆ ಮೇಲೆ ಮನೆಗೆ ಬಂದಿದ್ದು, ದೀಪಾವಳಿ ಹಬ್ಬದ ಬಳಿಕ ಕರ್ತವ್ಯಕ್ಕೆ ವಾಪಸ್ಸು ತೆರಳಬೇಕಿತ್ತು.
ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.