ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಶಿರಹಟ್ಟಿ ತಾಲೂಕಿನ ಗ್ರಾಮಗಳನ್ನು ಶಿರಹಟ್ಟಿ ಪೊಲೀಸ್ ಠಾಣೆಗೆ ಹಾಗೂ ಲಕ್ಷೇಶ್ವರ ತಾಲೂಕಿನ ಗ್ರಾಮಗಳನ್ನು ಲಕ್ಷೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡಿಸುವಂತೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿರೇಂದ್ರಗೌಡ ಪಾಟೀಲ ಮಾಡಿದ ಮನವಿಗೆ ಗೃಹ ಮಂತ್ರಿಗಳು ಸಹಮತ ಸೂಚಿಸಿದ್ದಾರೆ.
ಇದೀಗ ಶಿರಹಟ್ಟಿ ತಾಲೂಕಿನ ಗ್ರಾಮಗಳಾದ ನಾಗರಮಡುವು, ಅಂಕಲಿ, ಗೋವನಕೊಪ್ಪ, ಬಿಜ್ಜೂರ, ಕೊಗನೂರ, ಕೊಂಚಿಗೇರಿ, ಕೊಕ್ಕರಗುಂದಿ, ಬೂದಿಹಾಳ ಗ್ರಾಮಗಳು ಸದ್ಯ ಲಕ್ಷೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುತ್ತಿವೆ. ಅದರಂತೆ ಲಕ್ಷೇಶ್ವರ ತಾಲೂಕಿನ ಗ್ರಾಮಗಳಾದ ನಾದಿಗಟ್ಟಿ, ವಡ್ಡರಪಾಳ್ಯ, ನೇಲೋಗಲ್, ಮಾಡಳ್ಳಿ, ಯತ್ನಳ್ಳಿ, ಯಳವತ್ತಿ, ಕುಂದ್ರಳ್ಳಿ, ಕುಂದ್ರಳ್ಳಿ ತಾಂಡಾ, ಶೆಟ್ಟಿಕೇರಿ ಗ್ರಾಮಗಳು ಶಿರಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟಿವೆ.
ಲಕ್ಷೇಶ್ವರ ಸ್ವತಂತ್ರ ತಾಲೂಕು ಕೇಂದ್ರವಾಗಿ 8 ವರ್ಷಗಳೇ ಕಳೆದಿದ್ದರೂ ಇನ್ನೂ ಉಭಯ ತಾಲೂಕಿನ ಅನೇಕ ಗ್ರಾಮಗಳ ಪೊಲೀಸ್ ಠಾಣಾ ವ್ಯಾಪ್ತಿ ಮಾತ್ರ ಬದಲಾಗಿಲ್ಲ. ಇದರಿಂದ ಸಾರ್ವಜನಿಕರು ತಮ್ಮ ಸಣ್ಣಪುಟ್ಟ ವ್ಯಾಜ್ಯಗಳಿಗೆ ಹಾಗೂ ಇತರೆ ವ್ಯಾಜ್ಯಗಳ ಸಲುವಾಗಿ ಅಲೆದಾಡುವುದು ತಪ್ಪಿಲ್ಲ. ಇದರಿಂದ ತಹಸೀಲ್ದಾರ, ಪೊಲೀಸ್ ಅಧಿಕಾರಿಗಳಿಗೆ ಅಪರಾಧಗಳ ಪಂಚನಾಮ ಮಾಡಲು ಹಾಗೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಕಾನೂನು ತೊಡಕು ಆಗುತ್ತಿದೆ.
ಆದ್ದರಿಂದ ಶಿರಹಟ್ಟಿ ತಾಲ್ಲೂಕಿನ ಗ್ರಾಮಗಳನ್ನು ಶಿರಹಟ್ಟಿ ಪೊಲೀಸ್ ಠಾಣೆಗೆ ಹಾಗೂ ಲಕ್ಷೇಶ್ವರ ತಾಲೂಕಿನ ಗ್ರಾಮಗಳನ್ನು ಲಕ್ಷೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಗೆ ವರ್ಗಾವಣೆ ಮಾಡಲು ಕಾನೂನು ಮಂತ್ರಿಗಳಾದ ಹೆಚ್.ಕೆ. ಪಾಟೀಲರ ಶಿಫಾರಸ್ಸಿನ ಮೇರೆಗೆ ಗೃಹ ಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಇದೀಗ ಗೃಹ ಮಂತ್ರಿಗಳು ಮನವಿಗೆ ಸ್ಪಂದಿಸಿರುವುದಕ್ಕೆ ಮತ್ತು ಲಕ್ಷೇಶ್ವರ ಠಾಣೆಯನ್ನು ಪಿಐ ಠಾಣೆಯಾಗಿಸಲು ಗ್ರೀನ್ ಸಿಗ್ನಲ್ ನೀಡಿರುವುದಕ್ಕೆ ಸಾರ್ವಜನಿಕರ ಪರವಾಗಿ ವೀರೇಂದ್ರ ಪಾಟೀಲ ಅಭಿನಂದನೆಗಳನ್ನು ತಿಳಿಸಿದ್ದಾರೆ.



