ಬೆಂಗಳೂರು: ಸಿಎಂ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ತುಮಕೂರು ಭಾಗದ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ಗೆ ಬೀಳಿಸಲು ಯತ್ನ ನಡೆಸಿದ್ದು, ಮತ್ತೊಬ್ಬ ಪ್ರಭಾವಿ ನಾಯಕನ ಟೀಂನಿಂದ ಸತತವಾಗಿ ಹನಿಟ್ರ್ಯಾಪ್ಗೆ ಬೀಳಿಸಲು ಪ್ರಯತ್ನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದೀಗ ಸಚಿವ ಕೆಎನ್ ರಾಜಣ್ಣ ಅವರನ್ನೇ ಹನಿಟ್ರ್ಯಾಪ್ ಬಲೆ ಕೆಡವಲು ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ರಾಜಣ್ಣ ಅವರೇ ಸದನದಲ್ಲಿ ಬಹಿರಂಗಪಡಿಸಿದ್ದಾರೆ.
ರಾಷ್ಟ್ರ ಮಟ್ಟದ ಎಲ್ಲ ಪಕ್ಷದ ನಾಯಕರ ಹನಿಟ್ರ್ಯಾಪ್ಗಳ ಪೆನ್ಡ್ರೈವ್ಗಳು ಕೂಡ ಇವೆ. ಗೃಹ ಮಂತ್ರಿಗಳು ಈ ಬಗ್ಗೆ ತನಿಖೆ ಮಾಡಿಸಬೇಕು. ಈ ಬಗ್ಗೆ ತನಿಖೆ ಮಾಡಿಸಿ ಪ್ರೊಡ್ಯೂಸರ್, ಡೈರೆಕ್ಟರ್, ನಟಿಯರು ಯಾರಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ಈ ಬಗ್ಗೆ ನಾನು ದೂರು ನೀಡುತ್ತೇನೆ, ಒಂದು ವಿಶೇಷ ತನಿಖೆಯನ್ನು ಮಾಡಿಸಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಪರಮೇಶ್ವರ್ ಅವರು, ಇದು ಈ ಸದನದ ಸದಸ್ಯನ ಪ್ರಶ್ನೆ. ಇದಕ್ಕೆಲ್ಲಾ ಒಂದು ಕಡಿವಾಣ ಹಾಕಬೇಕು. ಕರ್ನಾಟಕ ವಿಧಾನಸಭೆ ಅತ್ಯಂತ ಗೌರವ ಹೊಂದಿದೆ. ದೊಡ್ಡ ದೊಡ್ಡ ಸದಸ್ಯರ ಆದರ್ಶಗಳನ್ಮ ಬಿಟ್ಟು ಹೋಗಿದ್ದಾರೆ. ಸದನದ ಸದಸ್ಯರ ಮರ್ಯಾದೆ ಕಾಪಾಡಬೇಕಾದರೆ ಇದಕ್ಕೆ ಇತಿಶ್ರೀ ಹಾಕಬೇಕು. ರಾಜಣ್ಣ ಅವರು ಏನು ಪ್ರಸ್ತಾಪ ಮಾಡಿದ್ದಾರೆ. ಅವರು ಮನವಿ ಕೊಡ್ತೇನೆ ಎಂದು ಹೇಳಿದ್ದಾರೆ. ಅವರ ಮನವಿ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆ ಮಾಡಿಸ್ತೇನೆ ಎಂದ ಸಚಿವ ಪರಮೇಶ್ವರ್ ಹೇಳಿದರು.