ಬೆಂಗಳೂರು: ಮದ್ವೆ ಮಾಡಿಸ್ತೀನಿ ಅಂತ ವ್ಯಕ್ತಿಯನ್ನ ನಂಬಿಸಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡಿದ ಖತರ್ನಾಕ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಬಂಧಿತ ಆರೋಪಿಗಳಾಗಿದ್ದು, ರ್ಯಾಪಿಡೋ ಓಡಿಸ್ತಿದ್ದ ಸುರೇಂದ್ರ ಕುಮಾರ್ ಸಂತ್ರಸ್ತ ಯುವಕನಾಗಿದ್ದಾನೆ. ಕೆಲ ದಿನಗಳ ಹಿಂದೆ ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಿತರಾಗಿದ್ದಳು.
ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಸಂತ್ರಸ್ತ ಯುವಕ “ತಾನು ವಧು ಹುಡುಕುತ್ತಿದ್ದು ಕನ್ಯೆ ಇದ್ದರೆ ಹೇಳಿ” ಎಂದು ಮಂಜುಳಗೆ ಹೇಳಿದ್ದರು. ಸಂತ್ರಸ್ತ ಯುವಕ ಜನವರಿ 20 ರಂದು ಮಂಜುಳಾಗೆ ಕರೆ ಮಾಡಿ ವಿಚಾರಿಸಿದಾಗ, ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು.
ಅದರಂತೆ ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಸಂತ್ರಸ್ತ ಯುವಕ ಹೋಗಿದ್ದನು. ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ಯುವಕನಿಗೆ ವಿಜಯಲಕ್ಷ್ಮಿ ಪರಿಚಯ ಮಾಡಿಸಿದ್ದಾಳೆ. ಟೀ ತಯಾರಿಸುತ್ತಿರು ಬರುತ್ತೇನೆ ಎಂದು ಹೇಳಿ, ಯುವಕನಿಂದ ಹಣ ಪಡೆದು ವಿಜಯಲಕ್ಷ್ಮಿ ಮನೆಯಿಂದ ತೆರಳಿದ್ದಾಳೆ.
ಮನೆಯಲ್ಲಿ ಒಂಟಿಯಾಗಿದ್ದ ಸಂತ್ರಸ್ತ ಯುವಕ ಮತ್ತು ಲೀಲಾವತಿ ಇಬ್ಬರೇ ಇದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ ಮತ್ತು ವೆಂಕಟೇಶ ಬಂದಿದ್ದಾರೆ. ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಾ? ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಸಂತ್ರಸ್ತ ಯುವಕ, ಆರೋಪಿಗಳಿಗೆ ಪೋನ್ ಪೇ ಮೂಲಕ 50 ಸಾವಿರ ಹಣ ಕಳುಹಿಸಿದ್ದಾನೆ.
ಬಳಿಕ, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಸಂತ್ರಸ್ತ ಯುವ, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.