ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಮಲು ಬರಿಸುವ ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೇ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಪಿಎಸ್ಐ ನಾಗರಾಜ ಗಡಾದ ಹೇಳಿದರು.
ಅವರು ಪಟ್ಟಣದ ಪುರಸಭೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಗದಗ ಜಿಲ್ಲಾ ಪೊಲೀಸ್ ಇಲಾಖೆ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮೊಬೈಲ್ ಮೂಲಕ ಸಮಾಜ ವಿರೋಧಿ ಮೇಸೆಜ್ ಕಳಿಸುವದು, ವಿದ್ಯಾರ್ಥಿನಿಯರನ್ನು ಚುಡಾಯಿಸುವದು ಹಾಗೂ ಲೈಸನ್ಸ್, ಹೆಲ್ಮೆಟ್ ಇಲ್ಲದೆ ವಾಹನ ಓಡಿಸುವದು ಸೇರಿದಂತೆ ಅನೇಕ ಅಪರಾಧಗಳಿಗೆ ಕಾನೂನಿನಲ್ಲಿ ಶಿಕ್ಷೆಗಳಿವೆ. ಅವುಗಳಿಗೆ ಒಳಗಾಗದಂತೆ ಜಾಗೃತೆ ವಹಿಸಿ, ಮಾದಕ ವಸ್ತುಗಳ ಬಗ್ಗೆ ಯಾವುದೇ ದೂರುಗಳಿದ್ದರೂ ಇಲಾಖೆಗೆ ದೂರು ನೀಡಿ. ಇತ್ತೀಚಿನ ದಿನಗಳಲ್ಲಿ ಪ್ಯಾಶನ್ ಮತ್ತು ಪಾಶ್ಚಿಮಾತ್ಯ ಪದ್ಧತಿಯ ಆಕರ್ಷಣೆಗೆ ಒಳಗಾಗಿ ಯುವ ಸಮೂಹ ದಾರಿ ತಪ್ಪುತ್ತಿದೆ. ಕುಡಿತ, ಗುಟ್ಕಾ, ಗಾಂಜಾ, ಅಫೀಮು ಮತ್ತು ಕೆಲವು ಮತ್ತು ತರಿಸುವ ಮಾತ್ರೆಗಳು ಇತ್ಯಾದಿಗಳ ಅಭ್ಯಾಸದಿಂದ ಸಮಾಜದಲ್ಲಿ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಇದರಿಂದ ಅವರ ಜೀವನ ಹಾಳು ಮಾಡಿಕೊಳ್ಳುವದರ ಜೊತೆಗೆ ಕುಟುಂಬವನ್ನು ಬೀದಿಗೆ ತರುವಂತಹ ಘಟನೆಗಳು ನಡೆಯುತ್ತಿವೆ. ಮಾದಕ ವಸ್ತುಗಳ ಉಪಯೋಗದ ಕೆಟ್ಟ ಪರಿಣಾಮಗಳನ್ನು ತಿಳಿದುಕೊಂಡು ಅದರಿಂದ ದೂರ ಇರುವಂತೆ ಸಲಹೆ ನೀಡಿದರು.
ಉಪನ್ಯಾಸಕರಾದ ಎಸ್.ಜಿ. ಹುಳಕನವರ, ಮಂಜುನಾಥ ಬೂದಿಹಾಳ, ಶಿಲ್ಪಾ ಮುದಗಲ್, ಪಿ.ಡಿ. ದೇಶಪಾಂಡೆ, ಬಾಬು ಪಾಟೀಲ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳಾದ ಮಾರುತಿ ಲಮಾಣಿ, ರಾಥೋಡ ಮುಂತಾದವರಿದ್ದರು.
ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು. ಮಾದಕ ವಸ್ತುಗಳ ಬಳಕೆ ಹಾಗೂ ಅಕ್ರಮ ಸಾಗಣೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಜಾಗತಿಕವಾಗಿ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭವಿಷ್ಯ ರೂಪಿಸುವ ವಿದ್ಯಾರ್ಥಿ ಜೀವನದ ಸಮಯ ಅಮೂಲ್ಯ. ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ಸಮಯ ಹಾಳುಮಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಿಎಸ್ಐ ನಾಗರಾಜ ಗಡಾದ ಹೇಳಿದರು.