ರಾಮನಗರ:- ಮಾಗಡಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮಾಗಡಿ ಪಟ್ಟಣದಲ್ಲಿ ಮನೆಯ ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಸಾಧಿಕ್, ಖಾಲಿದ್, ಹಂಜಾ ಹಾಗೂ ಚೂರಿಕಟ್ಟೆ ಶಿವ ಎಂದು ಗುರುತಿಸಲಾಗಿದೆ. ಬಂಧಿತರಿಂದ 4 ಕೋಟಿ ರೂ. ಮೌಲ್ಯದ 5 ಕೆಜಿ 500 ಗ್ರಾಂ ಚಿನ್ನಾಭರಣ, ನಗದು ಹಾಗೂ 1 ಆಲ್ಟೋ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಸಾಧಿಕ್ ತನ್ನ ಸಹಚರರೊಂದಿಗೆ ಸೇರಿ ಕಾರಿನಲ್ಲಿ ಬಂದು, ಬೀಗ ಹಾಕಿದ ಮನೆಗಳನ್ನು ಗುರುತಿಸಿ, ಮನೆಯಲ್ಲಿ ಯಾರೂ ಇಲ್ಲವೆಂದು ಖಚಿತಪಡಿಸಿಕೊಂಡು ಬಳಿಕ ರಾತ್ರಿ ವೇಳೆ ಮನೆಯ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದರು.
ಈ ನಾಲ್ವರ ಗ್ಯಾಂಗ್ ತರೀಕೆರೆ, ಬೇಲೂರು, ಸಾಗರ ಟೌನ್, ಮೂಡಿಗೆರೆ, ಕೆ.ಆರ್.ಪೇಟೆ ಟೌನ್, ಮಂಡ್ಯ ಗ್ರಾಮಾಂತರ, ಹಳೇಬೀಡು, ಹೊಳೇನರಸಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.