ಬೆಳಗಾವಿ:- ಬೆಳಗಾವಿಯ ವಿವಾಹಿತೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿನ ಸುತ್ತ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ. ಮಚ್ಛೆ ಗ್ರಾಮದ ಯುವಕ ತನ್ನ ಪತ್ನಿಯನ್ನು ಬೆಂಗಳೂರಿಗೆ ಕರೆದೊಯ್ದ ಬಳಿಕ ಯುವತಿಯೂ ಸಂಶಯಾಸ್ಪದವಾಗಿ ಆತ್ಮಹತ್ಯೆಗೆ ಶರಣಾಗಿದ್ದು, ಯುವತಿಯ ಮನೆಯವರು ಅಳಿಯನೇ ಕೊಲೆ ಮಾಡಿರುವುದಾಗಿ ಆರೋಪಿಸಿದ್ದಾರೆ. ಇಂದು ನ್ಯಾಯಕ್ಕಾಗಿ ಯುವತಿಯ ಮನೆಯವರು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಬೆಳಗಾವಿಯ ಮಚ್ಚೆ ಗ್ರಾಮದ ಗಣಪತ ಗಲ್ಲಿಯ ರಹಿವಾಸಿ ಸ್ವಾತಿ ಶ್ರೀಧರ ಸನದಿ ಜುಲೈ 12 ರಂದು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಯುವತಿಯ ಮನೆಯವರು ಆರೋಪಿಸಿ, ನ್ಯಾಯಕ್ಕಾಗಿ ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಬಿಜೆಪಿ ಮಹಿಳಾ ಕಾರ್ಯಕರ್ತೆಯಾದ ಡಾ. ಸೋನಾಲಿ ಸರನೋಬತ್ ಅವರು ಬೆಳಗಾವಿಯ ಸ್ವಾತಿ ಕೇದಾರಿ ಸನದಿ ಎಂಬ ಯುವತಿ ಮದುವೆಯ ಪತಿಯೊಂದಿಗೆ ಬಳಿಕ ಬೆಂಗಳೂರಿನಲ್ಲಿ ವಾಸವಾಗಿದ್ದಳು. ಪದೇ ಪದೇ ಸ್ವಾತಿ ಶಿಕ್ಷಣಕ್ಕೆ ಪತಿ ಮನೆಯವರು ವಿರೋಧ ವ್ಯಕ್ತಪಡಿಸುತ್ತಿದ್ದರು. ಸ್ವಾತಿಗೆ ಪತಿಯ ಮನೆಯವರು ಕಿರುಕುಳ ನೀಡಿದ್ದಾರೆ. ನಂತರ ಜುಲೈ 12 ರಂದು ಸ್ವಾತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಕಿಟಕಿಗೆ ನೇಣು ಹಾಕಿಕೊಂಡಿದ್ದು, ಅನುಮಾನವನ್ನು ಹುಟ್ಟು ಹಾಕಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿಲ್ಲವೆಂದು ದೂರಿದರು.
ತಮ್ಮ ಮಗಳಿಗೆ ನೀಡಿದ ತೊಂದರೆಯನ್ನು ತಿಳಿಸಿ, ಮಗಳ ಸಾವಿಗೆ ನ್ಯಾಯ ನೀಡಬೇಕೆಂದು ಸ್ವಾತಿ ತಾಯಿ ಕಣ್ಣೀರು ಹಾಕಿದರು. ಇನ್ನು ಸ್ವಾತಿ ಕುಟುಂಬಸ್ಥರಾದ ಶಾಂತಾ ಮಾತನಾಡಿ, ಪತಿಯ ಮನೆಯವರ ಕಿರುಕುಳದಿಂದಾಗಿ ಸ್ವಾತಿ ಪತಿ ಮನೆಗೆ ಹೋಗಲು ಸಿದ್ಧಳಾಗಿರಲಿಲ್ಲ. ಹಲವಾರು ಬಾರಿ ಹೇಳಿಕೊಂಡಿದ್ದಳು. ಆದರೂ ಮನವೊಲಿಸಿ, ಕೈ ಕಾಲು ಮುಗಿದು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಸ್ವಾತಿ ಆತ್ಮಹತ್ಯೆ ಅನುಮಾನಗಳಿಂದ ಕೂಡಿದ್ದು ತನಿಖೆಯನ್ನು ಕೈಗೊಳ್ಳಬೇಕು. ನಮಗೆ ಪತಿ ಮೇಲೆಯೇ ಸಂಶಯವಿದೆ ಎಂದರು.
ಇನ್ನು ಸ್ವಾತಿ ಚಿಕ್ಕಪ್ಪ ಗೋಪಾಲ ಕೇದಾರಿ ಅವರು ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಿದ್ದು, ಶ್ರೀಧರ ಲಕ್ಷ್ಮಣ ಸನದಿ ಎಂಬಾತನೊಂದಿಗೆ ಒಂದೂವರೆ ವರ್ಷದ ಹಿಂದೆ ಸ್ವಾತಿಯೊಂದಿಗೆ ಮದುವೆಯಾಗಿದ್ದ. ಬೆಂಗಳೂರಿನಲ್ಲಿ ಬಿಇ ಮೆಕ್ಯಾನಿಕಲ್ ನೌಕರಿ ಮಾಡುತ್ತಿದ್ದ. ಈ ನಡುವೆ ಪತಿ-ಪತ್ನಿಯ ಮಾತುಕತೆ ನಿಂತು ಹೋಗಿತ್ತು. ನಂತರ ಏಕಾಏಕಿ ಫೋನು ಮಾಡಿ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತೇನೆ ಎಂದಾಗ ನಮ್ಮ ಮಗಳು ಹೋಗಲು ಒಪ್ಪಲಿಲ್ಲ. ಆದರೂ ಮನವೊಲಿಸಿ ಕರೆದುಕೊಂಡು ಹೋದ. ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಕರೆ ಮಾಡಿ ಹೇಳಿದ್ದಾರೆ. ಕೊನೆಗೆ ಅಂತ್ಯವಿಧಿಗೂ ಯಾರೂ ಬಂದಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ನಮಗೆ ಅವರ ಮೇಲೆಯೇ ಸಂಶಯವಿದೆ ಎಂದು ಆರೋಪಿಸಿದರು.