ತುಮಕೂರು: ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ದಾಸರಹಳ್ಳಿಯಲ್ಲಿ ನಡೆದಿದ್ದ ಪರಮೇಶ್ ಸಾವಿನ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸತ್ಯ ಬೆಳಕಿಗೆ ಬಂದಿದೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದ್ದ ಘಟನೆ ಈಗ ಕೊಲೆ ಪ್ರಕರಣವೆಂದು ಬಹಿರಂಗವಾಗಿದೆ.
ಪರಮೇಶ್ ಅವರ ಪತ್ನಿ ಆಶಾ ಈಗಾಗಲೇ ಎರಡು ಮದುವೆಯಾಗಿದ್ದು, ಪರಮೇಶ್ ಅವರೊಂದಿಗೆ ಸುಮಾರು 10 ವರ್ಷಗಳ ಕಾಲ ಜೀವನ ನಡೆಸುತ್ತಿದ್ದಳು. ಆದರೆ ಮೂರನೇ ಮದುವೆ ಮಾಡುವ ಆಸೆಯಿಂದ ಆಕೆ ಭೀಕರ ಪ್ಲಾನ್ ರೂಪಿಸಿದ್ದಾಳೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆಶಾ ತನ್ನ ಪ್ರಿಯಕರ ಚಂದ್ರಪ್ಪ ಜೊತೆಗಿನ ಸಂಬಂಧಕ್ಕಾಗಿ ಗಂಡನನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದಳು. ಜನವರಿ 30ರಂದು ಪರಮೇಶ್ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಎಲ್ಲರನ್ನು ನಂಬಿಸಿದ್ದಳು.
ಅಷ್ಟೇ ಅಲ್ಲದೆ, ಗಂಡನ ಅಂತ್ಯಕ್ರಿಯೆ ನಡೆದ ಕೆಲವೇ ದಿನಗಳಲ್ಲಿ ಆಶಾ ಚಂದ್ರಪ್ಪನೊಂದಿಗೆ ಮದುವೆಯಾಗಿದ್ದಳು. ಈ ಬೆಳವಣಿಗೆಯಿಂದ ಅನುಮಾನಗೊಂಡ ಪರಮೇಶ್ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಹೆಬ್ಬೂರು ಪೊಲೀಸರು ಪ್ರಕರಣವನ್ನು ಬಯಲಿಗೆಳೆದಿದ್ದು, ಆರೋಪಿಗಳಾದ ಆಶಾ ಮತ್ತು ಚಂದ್ರಪ್ಪರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.



