ಬೆಳಗಾವಿ: ನಾನು ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಬಯಕೆ ಇದೆ. ಆದರೆ ಪಕ್ಷದ ಹೈಕಮಾಂಡ್ ಯಾವಾಗ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಎನ್ನುವುದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ನಮಗೆ ಐದು ವರ್ಷ ಆಡಳಿತ ಮಾಡಲು ಅವಕಾಶ ನೀಡಿದ್ದಾರೆ. ಪಕ್ಷದ ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತಾರೆ ಅವರು ಮಾಡುತ್ತಾರೆ. ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಜನರ ಆಸೆ, ಬಯಕೆ, ನಾನು ಸಿಎಂ ಆಗಬೇಕು ಎನ್ನುವುದು ಇರುತ್ತದೆ. ಆ ವಿಚಾರ ಆಮೇಲೆ ನಮ್ಮ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.
ಮೊದಲು ರಾಜ್ಯದ ಜನರು ನಿರೀಕ್ಷೆ ಮಾಡಿದ ಹಾಗೆ ನಾವು ಆಡಳಿತ ನೀಡಬೇಕು. ಪ್ರಸಕ್ತ ವರ್ಷ ಸ್ವಲ್ಪ ಮಳೆಯಾಗಿದೆ. ಒಂದು ದಿನ ಮಳೆ ಬರದಿದ್ದರೆ ಸರಕಾರಕ್ಕೆ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ವಿದ್ಯುತ್ ಬಿಲ್ ಹೆಚ್ಚಾಗುತ್ತದೆ. ಆದರೆ ನಾವು ರೈತರಿಗೆ ಕಡಿಮೆ ದರದಲ್ಲಿ ನೀಡುತ್ತೇವೆ. ಇಂಧನ ಸಚಿವ ಕೆ.ಜೆ.ಜಾಜ್೯ ಅವರು ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರು.
ಈ ಭಾಗದಲ್ಲಿ ಮಳೆ ಬರಲಿ, ಬಾರದೆ ಇರಲಿ. ಮಲ್ಲಪ್ರಭಾ ನದಿ ಒಂದು ಬಿಟ್ಟರೆ ಎಲ್ಲ ಜಲಾಶಗಳಲ್ಲಿ ನೀರಿನ ಸಂಗ್ರಹವಾಗಿದೆ. ಹಳೆ ಮೈಸೂರಿನ ಭಾಗದವರನ್ನು ದೇವರೆ ಕಾಪಾಡಬೇಕು ಎಂದರು. ಈ ಹಿಂದೆ ನಾವು ಇಂಧನ ಸಚಿವನಾಗಿದ್ದಾಗ ಸಾಕಷ್ಟು ಬದಲಾವಣೆ ತಂದಿದ್ದೇನೆ. ರೈತರಿಗೆ ಆರು ಗಂಟೆ ವಿದ್ಯುತ್ ಕೊಡುತ್ತಿದ್ದೇವು. ಅದರೆ ಈಗ ನಮ್ಮ ಸರಕಾರ ಮತ್ತೆ ಬಂದ ಮೇಲೆ ಏಳು ಗಂಟೆ ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಮಾತನಾಡಿ ತೀರ್ಮಾನ ಮಾಡಿದ್ದೇವು ಎಂದರು.
ರಾಜ್ಯ ಸರಕಾರ ನೀರು ಉಳಿತಾಯ ಮಾಡಲು ದೊಡ್ಡ ಸವಾಲು ಇದೆ. ನೀರಾವರಿ ಬಳಕೆದಾರ ಸಂಘಗಳನ್ನು ಕ್ರಿಯಾಶೀಲ ಮಾಡಿದ್ದೇನೆ. ಎತ್ತಿನಹೋಳೆ ನೀರು ತರಲು ನಿಯಮ ಮಾಡಲಾಗಿದೆ. ಅದು ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರುವರೆಗೂ ಹೋಗಬೇಕು. ಮಧ್ಯದಲ್ಲಿ ಯಾರಾದರೂ ಪೈಪ್ ಲೈನ್ ಹಾಕಿದರೆ ಕಷ್ಟವಾಗುತ್ತದೆ. ಅದಕ್ಕಾಗಿ ಕಾನೂನು ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಗಡಿಭಾಗದಲ್ಲಿರುವವರಿಗೆ ಮಹಾರಾಷ್ಟ್ರ ಸರಕಾರ ಆರೋಗ್ಯ ಇಲಾಖೆ ಯೋಜನೆ ಜಾರಿಗೊಳಿಸುವ ಕುರಿತ ಪ್ರಶ್ನೆ ಉತ್ತರಿಸಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಚರ್ಚೆ ನಡೆಸಿ ಸೂಕ್ತ ಉತ್ತರ ಮಹಾರಾಷ್ಟ್ರ ಸರಕಾರಕ್ಕೆ ನೀಡಲಾಗುವುದು ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಳಗಾವಿಗೆ ಸ್ಥಳಾಂತರಿಸುವ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಡಿ ಭಾಗ ಉಳಿಸಲು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಸುರಕ್ಷಿತ ಕನ್ನಡ ನಾಡು, ಕರ್ನಾಟಕದ ಎರಡನೇ ರಾಜ್ಯಧಾನಿ ಎಂದು ಕರೆಯಲಾಗುತ್ತಿದೆ ಎಂದರು.