ದಾವಣಗೆರೆ: ನಾನು ಸನ್ಯಾಸಿ ಅಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಹಳಬರು ಅಧಿಕಾರ ಅನುಭವಿಸಿ ಜಿಡ್ಡು ಹಿಡಿದು ಹೋಗಿದ್ದಾರೆ.
ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಸಚಿವ ಸ್ಥಾನ ನೀಡಿದ್ರೆ ಉತ್ತಮವಾಗಿ ಕೆಲಸ ಮಾಡುತ್ತಾರೆ. ನಾನು ಸನ್ಯಾಸಿ ಅಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಏನು ಕೆಲಸ ಮಾಡ್ತಿನಿ ಎಂದು ಆರು ತಿಂಗಳ ಬಾಂಡ್ ಬೇಕಾದರೂ ಕೊಡ್ತಿನಿ. ಜಿಲ್ಲೆಯ ಹಿರಿಯ ರಾಜಕಾರಣಿ ಶಾಸಕ ಶಾಂತನಗೌಡ್ರಿಗೆ ಕೊಟ್ಟರೂ ನಾನು ಖುಷಿ ಪಡುತ್ತೇನೆ ಎಂದಿದ್ದಾರೆ.
ಒಂದು ಜಿಲ್ಲೆಗೆ ಎರಡು ಸಚಿವ ಸ್ಥಾನ ಕೊಡಬಾರದು ಅಂತ ಏನಾದರೂ ಇದೆಯೇ? ಹೈಕಮಾಂಡ್ ಈಗಿನ ಸಚಿವರ ರಿಪೋರ್ಟ್ ನೋಡಿ ಅವರನ್ನೆಲ್ಲ ಕೈ ಬಿಡಬೇಕು. ಸಂಪುಟದಲ್ಲಿ 8-10 ಜನರನ್ನ ಬಿಡಲಿ, ಹೊಸಬರಿಗೆ ಅವಕಾಶ ಕೊಡಲಿ. 5 ರಿಂದ 6 ಬಾರಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಅವರಿಗೂ ಸಿಗಲಿ. ಎರಡುವರೆ ವರ್ಷ ಅಧಿಕಾರ ಹಂಚಿಕೆ ವಿಚಾರ ಈಗ ಮಾತನಾಡೋದು ಬೇಡ. ಉತ್ತಮವಾದ ಮುಖ್ಯಮಂತ್ರಿಗಳು ಇದ್ದಾರೆ ಎಂದು ಹೇಳಿದ್ದಾರೆ.