ಬೆಂಗಳೂರು:- 5 ವರ್ಷ ನಾನೇ ಸಿಎಂ, ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಅಧಿಕಾರ ಹಂಚಿಕೆ ಕುರಿತು ಮಾತನಾಡಿದ ಅವರು, ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ. ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ. ನಿಮಗೆ ಯಾಕೆ ಅನುಮಾನ? ಯಾಕೆ ಮತ್ತೆ ಮತ್ತೆ ಅದನ್ನ ಕೇಳುತ್ತೀರಾ? ಹೈಕಮಾಂಡ್ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿದ್ಯಾ? ನಾಯಕತ್ವ ಬದಲಾವಣೆ ಸಂಪುಟ ಪುನಾರಚನೆ ಎಲ್ಲದನ್ನ ತೀರ್ಮಾನ ಮಾಡುವುದು ಹೈಕಮಾಂಡ್. ಈ ಬಗ್ಗೆ ಹೈಕಮಾಂಡ್ ಇಲ್ಲಿಯವರೆಗೆ ಏನಾದರು ಮಾತನಾಡಿದ್ಯಾ? ಇಲ್ಲ ತಾನೇ, ಹಾಗಾದ್ರೆ ಮತೆ ಯಾಕೆ ಆ ಪ್ರಶ್ನೆ. ಹೈಕಮಾಂಡ್ ಹೇಳುವುದನ್ನ ನಾನು, ಶಾಸಕರು ಪಾಲಿಸಬೇಕು ಎಂದು ತಿಳಿಸಿದರು.
ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿ ಜೊತೆ ನಾನೇ ಮಾತಾಡಿದ್ದೇನೆ. ಇಲಾಖೆ ಕೆಲಸದ ಹಿನ್ನೆಲೆಯಲ್ಲಿ ಹೋಗಿದ್ದೇನೆ ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ. ಶಾಸಕರು, ಸಚಿವರು ದೆಹಲಿಗೆ ಹೋಗಬಾರದಾ? ಶಾಸಕರು ದೆಹಲಿಗೆ ಹೋಗಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮತ್ತೆ ನಾನು ಯಾಕೆ ಈ ಬಗ್ಗೆ ವಿವರಣೆ ಕೊಡಲಿ. ನಾಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡ್ತೀನಿ ಎಂದರು.


