ಬೆಂಗಳೂರು: ತಮಗೆ Z ಶ್ರೇಣಿಯ ಭದ್ರತೆ ನೀಡುವಂತೆ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಬರೆದಿದ್ದಾರೆ ಎನ್ನಲಾದ ಪತ್ರ ನನಗೆ ಇನ್ನೂ ಬಂದಿಲ್ಲ. ಪತ್ರ ಬಂದರೆ ಆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯಿಂದ Z ಶ್ರೇಣಿಯ ಭದ್ರತೆ ಕೋರಿ ಪತ್ರ ಬಂದಿಲ್ಲ. ಈಗಾಗಲೇ ಜನಾರ್ದನ ರೆಡ್ಡಿ ಹಾಗೂ ಒಬ್ಬ ಶಾಸಕ ದೂರು ನೀಡಿದ್ದಾರೆ. ಎರಡೂ ದೂರುಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಘಟನೆ ವೇಳೆ ಪೆಟ್ರೋಲ್ ಬಾಂಬ್ ಬಳಕೆಯಾಗಿದೆ ಎಂಬ ಜನಾರ್ದನ ರೆಡ್ಡಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಈ ಕುರಿತು ತನಿಖೆ ನಡೆಯುತ್ತಿದೆ. ತನಿಖೆ ಮುಗಿದ ಬಳಿಕ ಬಂದೂಕು, ಹ್ಯಾಂಡ್ ಗ್ರೆನೇಡ್ ಅಥವಾ ಪೆಟ್ರೋಲ್ ಬಾಂಬ್ ಬಳಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ತನಿಖೆ ನಡೆಯುತ್ತಿದೆ ಎಂದರು.
ಅಮಾನತುಗೊಂಡ ಬಳ್ಳಾರಿ ಎಸ್ಪಿ ಬೆಂಗಳೂರಿಗೆ ಬಂದಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಮಾನತು ಆದ ನಂತರ ಬೇಸರವಾಗುವುದು ಸಹಜ. ಅವರು ಬೆಂಗಳೂರಿಗೆ ಬರುವಾಗ ತಮ್ಮ ಸ್ನೇಹಿತರ ಫಾರ್ಮ್ಹೌಸ್ನಲ್ಲಿ ವಿಶ್ರಾಂತಿ ಪಡೆದು ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ತಿಳಿಸಿದರು.
ಮುಂದೆ ಗನ್ ಲೈಸೆನ್ಸ್ ನೀಡುವ ನಿಯಮ ಬದಲಾವಣೆ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಗನ್ ಲೈಸೆನ್ಸ್ ನೀಡಲು ಕೇಂದ್ರ ಸರ್ಕಾರದ ಸ್ಪಷ್ಟ ಮಾನದಂಡಗಳಿವೆ. ಅದೇ ಮಾನದಂಡಗಳನ್ನು ರಾಜ್ಯ ಸರ್ಕಾರವೂ ಅನುಸರಿಸುತ್ತಿದೆ. ಇದು ರಾಜ್ಯದ ನಿಯಮವಲ್ಲ, ರಾಷ್ಟ್ರೀಯ ನೀತಿ. ಒಂದು ವೇಳೆ ನೀತಿ ಬದಲಾವಣೆ ಅಗತ್ಯವಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.



