ಚಿಕ್ಕಮಗಳೂರು: ಕಾಂಗ್ರೆಸ್ ನಾಯಕರ ಮೇಲಿನ ಇಡಿ ರೇಡ್ ನಾನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಮುಖಂಡ ಸಿಟಿ ರವಿ ಹೇಳಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನ ಹಲವು ನಾಯಕರ ಮನೆ ಮೇಲೆ ನಡೆದ ಇಡಿ ದಾಳಿ ಕುರಿತು ಸಿಟಿ ರವಿ ಪ್ರತಿಕ್ರಿಯಿಸಿದರು. ವಾಲ್ಮೀಕಿ ಹಗರಣದ 187 ಕೋಟಿ ರೂ. ಹಣ ಒಡವೆ ಅಂಗಡಿ, ಪೋರ್ಶೆ ಕಾರು ಶೋರೂಂ, ಬಾರ್ಗೆ ಹೋಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಲೋಕಸಭೆ ಚುನಾವಣೆಗೆ ಈ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಅಂಕಿ-ಅಂಶ ಸಮೇತ ಮಾಹಿತಿ ನೀಡಿದ್ವಿ. ನಾವು ಮಾಹಿತಿ ಕೊಟ್ಟರೂ ಸಿಐಡಿ ಸರಿಯಾಗಿ ತನಿಖೆ ಮಾಡಲಿಲ್ಲ. ಈಗ ಇಡಿ ರೇಡ್ ಮಾಡಿರೋದನ್ನ ನಾನು ಸ್ವಾಗತಿಸುತ್ತೇನೆ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ. ಪರಿಶಿಷ್ಟ ಪಂಗಡದ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಯೋಜನೆ, ವಾಹನ-ಭೂ ಖರೀದಿಗೆ ಬಳಕೆ ಆಗಬೇಕಾದ ಹಣ ಚುನಾವಣೆ ಅಕ್ರಮ, ಬಾರ್, ಕಾರು ಶೋ ರೂಂಗೆ ಬಳಕೆಯಾಗೋದು ದರೋಡೆಗಿಂತ ಕ್ರೂರವಾಗಿರೋದು. ವ್ಯವಸ್ಥೆಯೊಳಗೆ ಇರೋರೆ ಮಾಡಿದ ದರೋಡೆ, ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ವಿಚಾರ ಕುರಿತು ಪ್ರತಿಕ್ರಿಯಿಸಿ, ಕಾಂತರಾಜ್ ವರದಿಯನ್ನು ರಾಜ್ಯ ಸರ್ಕಾರ ವೈಜ್ಞಾನಿಕ ವರದಿ ಎಂದು ಸಮರ್ಥನೆ ಮಾಡಿತ್ತು. ಸಿಎಂ ಅದನ್ನ ತಮ್ಮ ಮಹತ್ವಾಕಾಂಕ್ಷೆ ಎಂದು ಹೇಳುತ್ತಿದ್ದರು. ಕಾಂತರಾಜ್ ವರದಿ ಬಳಿಕ ಜಯಪ್ರಕಾಶ್ ಹೆಗ್ಡೆ ಸ್ಕೂಟ್ನಿ ಮಾಡಿದ್ದೇನೆ ಎಂದಿದ್ರು. ನೂರಾರು ಕೋಟಿ ಖರ್ಚು ಮಾಡಿದ್ದಾರೆ. ಈಗ ಮತ್ತೆ ಜಾತಿ ಗಣತಿ ಅಂತಿದ್ದಾರೆ. ಹಾಗಾದ್ರೆ ಮೊದಲಿನ ವರದಿ ಅವೈಜ್ಞಾನಿಕ ಅಂತ ಒಪ್ಕೊಳ್ತೀರಾ? ವೈಜ್ಞಾನಿಕ ಎಂದು ಒಪ್ಪಿಕೊಳ್ಳುವುದಾದರೆ ಸರ್ಕಾರದ ಹಣವನ್ನು ವಸೂಲಿ ಮಾಡಿ ಎಂದು ಆಗ್ರಹಿಸಿದರು.