ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಜನತಾ ಪಾರ್ಟಿಯ ಗದಗ ಜಿಲ್ಲಾ ಅಧ್ಯಕ್ಷರ ಸ್ಥಾನಕ್ಕೆ ಮಾಜಿ ಸಚಿವ ಸಿ.ಸಿ ಪಾಟೀಲ ಪುತ್ರ ಉಮೇಶಗೌಡ್ರ ಪಾಟೀಲ್, ಮಾಜಿ ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಹಲವು ಘಟಾನುಘಟಿ ನಾಯಕರ ಪೈಪೋಟಿಯಿತ್ತು. ಅಂತಿಮವಾಗಿ ಹಿಂದಿನ ಜಿಲ್ಲಾಧ್ಯಕ್ಷ ತೋಟಪ್ಪ ಕುರುಡಗಿ (ರಾಜು) ಅವರನ್ನೇ ನೇಮಕ ಮಾಡಿ ಹೈಕಮಾಂಡ್ ಆದೇಶ ಹೊರಡಿಸಿದೆ.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನೂತನ ಜಿಲ್ಲಾಧ್ಯಕ್ಷರ ಘೋಷಣೆ ಹಾಗೂ ಪದಗ್ರಹಣ ಸಮಾರಂಭ ಗುರುವಾರ ನಡೆಯಿತು. ಶಶಿಮೌಳಿ ಕುಲಕರ್ಣಿ ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಿದರು. ಈ ವೇಳೆ ಬಿಜೆಪಿಯ ಮುಖಂಡರು ನೂತನ ಅಧ್ಯಕ್ಷರಿಗೆ ಶಾಲು ಹೊದೆಸಿ ಶುಭ ಕೋರಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ಎಂ.ಎಸ್. ಕರಿಗೌಡ್ರ, ಗದಗ ಜಿಲ್ಲೆಯ 967 ಮತಗಟ್ಟೆಗಳಲ್ಲಿ ಸಕ್ರಿಯ ಸದಸ್ಯರನ್ನು ಆಯ್ಕೆ ಮಾಡಿದ್ದು, ಎಲ್ಲ ಬೂತ್ಗಳ ಕಮಿಟಿ, ಮಂಡಳ ಅಧ್ಯಕ್ಷರ ಚುನಾವಣೆಗಳನ್ನು ಈಗಾಗಲೇ ನಡೆಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 994 ಸಕ್ರಿಯ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಅಂತಿಮವಾಗಿ ಜಿಲ್ಲಾಧ್ಯಕ್ಷರನ್ನು ಘೋಷಣೆ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜು ಕುರಡಗಿ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳಲಿ ಎಂದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಭಾರತೀಯ ಜನತಾ ಪಕ್ಷದ ವ್ಯವಸ್ಥೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಜಿಲ್ಲಾಧ್ಯಕ್ಷರ ಚುನಾವಣೆ ಜರುಗುತ್ತದೆ. ಕಾಂಗ್ರೆಸ್ ಪಕ್ಷದಂತೆ ಒಬ್ಬರೇ 15-20 ವರ್ಷ ಅಧ್ಯಕ್ಷರಾಗುವ ವ್ಯವಸ್ಥೆ ಬಿಜೆಪಿಯಲ್ಲಿಲ್ಲ. ನೂತನ ಅಧ್ಯಕ್ಷರ ಘೋಷಣೆಯನ್ನು ಎಲ್ಲರೂ ಒಮ್ಮತವಾಗಿ ಒಪ್ಪಿಕೊಂಡು ಪಕ್ಷ ಬಲಪಡಿಸುವಲ್ಲಿ ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಶಿಮೌಳಿ ಕುಲಕರ್ಣಿ, ಅಶೋಕ ಹೆಬ್ಬಳ್ಳಿ, ನಿರ್ಮಲಾ ಕೊಳ್ಳಿ, ಸುರೇಶ ಮರಳಪ್ಪನವರ, ಬೂದಪ್ಪ ಹಳ್ಳಿ, ನಾಗನಗೌಡ ಕೆಂಗನಗೌಡ್ರ, ಸೋಮಲಿಂಗಪ್ಪ ಚರೆದ, ಮಹೇಶ ಮುಸಕಿನಬಾವಿ, ಉಮೇಶ ಮಲ್ಲಾಪೂರ, ಯಲ್ಲಪ್ಪ ಹಾರೊಗೇರಿ, ಸುನಿಲ ಮಹಾಚಿತಶೆಟ್ಟರ, ಹೇಮಗಿರಿಶ ಹಾವಿನಾಳ, ಸಂತೋಷ ಅಕ್ಕಿ, ಬಸವರಾಜ ಇಟಗಿ, ಮಂಜುನಾಥ ಮುಳಗುಂದ, ಈಶ್ವರಪ್ಪ ರಂಗಪ್ಪನವರ, ಸಿದ್ದೇಶ್ ಹೂಗಾರ, ಮಹಮ್ಮದ್ ಗೌಸ್ ತಾಲಿಮನವರ ಉಪಸ್ಥಿತರಿದ್ದರು.
ನೂತನ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಪಕ್ಷದ ಸೇವೆ ಮಾಡಲು ಅವಕಾಶ ನೀಡಿದ ರಾಜ್ಯಾಧ್ಯಕ್ಷರು ಹಾಗೂ ಹಿರಿಯರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಾಕಷ್ಟು ಶ್ರಮ ವಹಿಸಿದ್ದೇನೆ. 2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರ ಗೆಲ್ಲಲು ಕಾರ್ಯಕರ್ತರ ಜೊತೆಗೂಡಿ ಶ್ರಮವಹಿಸುತ್ತೇನೆ. ಜೊತೆಗೆ, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವಲ್ಲಿ ನಿರಂತರ ಚಟುವಟಿಯಲ್ಲಿ ಭಾಗವಹಿಸುತ್ತೇನೆ ಎಂದರು.