ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನಲ್ಲಿ ಸರಕಾರಿ ಸೇವೆಗೆ ಬಂದ ನನ್ನನ್ನು ಜನತೆ ಇದೀಗ ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ಎಲ್ಲ ಸಮಾಜದವರನ್ನೂ ಗೌರವಯುತವಾಗಿ ಕಾಣುವುದಾಗಿ ಇದೇ ವೇದಿಕೆ ವತಿಯಿಂದ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯ ಶ್ರೀ ಜ.ಫಕೀರೇಶ್ವರ ಮಠದ ಆವರಣದಲ್ಲಿ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕಾ ಲಂಬಾಣಿ ಬಂಜಾರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಂತ ಶ್ರೀ ಸೇವಾಲಾಲ್ ಮಹಾರಾಜರ 286ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನು ಚುನಾವಣೆ ಪೂರ್ವ ನಾಮಿನೇಶನ್ ಮಾಡುವ ಸಂದರ್ಭದಲ್ಲಿ ಇಂತಹ ಜನಸ್ತೋಮ ಕಂಡಿದ್ದೆ. ತದನಂತರ ಇಂದು ಸಹ ಅಷ್ಟೇ ಪ್ರಮಾಣದಲ್ಲಿ ಸಮಾಜದ ಜನತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಸಮಾಜವನ್ನು ಒಗ್ಗೂಡಿಸಿಕೊಂಡು ಹೋಗುವುದು ನನ್ನ ಕರ್ತವ್ಯವಾಗಿದೆ. ಆದರಳ್ಳಿಯ ಕುಮಾರ ಮಹಾರಾಜರು ಆಡಿಯೋ ಕ್ಲಿಪ್ನಲ್ಲಿ ಹೇಳಿದ್ದು ನೋವಿನ ವಿಷಯ. ಅಲ್ಲಿಯ ಜನತೆಗೆ ಬೆದರಿಕೆ ಹಾಕಿದ್ದನ್ನು ಸಮಾಜ ಸಹಿಸದು. ಸಮಾಜದಿಂದ ನಾವು, ನಮ್ಮಿಂದ ಸಮಾಜವಲ್ಲ ಎಂದರು.
ಇದಕ್ಕೂ ಮೊದಲು ಬೆಳಿಗ್ಗೆ 11 ಗಂಟೆ ಸುಮಾರಿಗೆ ತಹಸೀಲ್ದಾರ ಕಚೇರಿಯಿಂದ ಸಂತ ಶ್ರೀ ಸೇವಾಲಾಲರ ಭವ್ಯ ಭಾವಚಿತ್ರದ ಮೆರವಣಿಗೆಯು ಪ್ರಾರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠ ತಲುಪಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಹಾಗೂ ಬಿಗ್ಬಾಸ್ ವಿನ್ನರ್ ಹನಮಂತ ಲಮಾಣಿ, ಸರಿಗಮಪ ರನ್ನರ್ ಅಪ್ ರಮೇಶ ಲಮಾಣಿ ಕೂಡಾ ಪ್ರಮುಖ ಆಕರ್ಷಣೆಯಾಗಿದ್ದರು. ನಂತರ ಇಬ್ಬರು ಗಾಯಕರು ನೆರೆದ ಜನಸ್ತೋಮಕ್ಕೆ ಕೈ ಮುಗಿಯುತ್ತಾ, ಕೈ ಕುಲುಕುತ್ತಾ ಸಾಗಿದರು. ಈ ಸಂದರ್ಭದಲ್ಲಿ ಸಮಾಜದ ಯುವಕರು-ಯುವತಿಯರು ಡಿಜೆ ಸದ್ದಿಗೆ ತಮ್ಮ ಹೆಜ್ಜೆ ಹಾಕಿದರು.
ಸಾನ್ನಿಧ್ಯವನ್ನು ಲಿಂಗಸೂರು ಛಾವಣಿಯ ವಿಜಯ ಮಹಾಂತೇಶ್ವರಮಠದ ಜ.ಸಿದ್ದಲಿಂಗ ಶ್ರೀ ವಹಿಸಿದ್ದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಸಮಾಜದ ತಾಲೂಕಾಧ್ಯಕ್ಷ ಶಿವಣ್ಣ ಲಮಾಣಿ, ದೀಪಕ ಲಮಾಣಿ, ದೇವಪ್ಪ ಲಮಾಣಿ, ಜಾನು ಲಮಾಣಿ, ಸುನೀಲ ಮಹಾಂತಶೆಟ್ಟರ, ಆನಂದ ಗಡ್ಡದ್ದೇವರಮಠ, ನಾಗರಾಜ ಲಕ್ಕುಂಡಿ, ಮಂಜುನಾಥ ಘಂಟಿ, ಗುರಪ್ಪ ಲಮಾಣಿ, ರಾಮಣ್ಣ ಶಿಗ್ಲಿ, ಬಿಇಓ ಎಚ್.ಎನ್.ನಾಯಕ, ಪಿಎಸ್ಐ ಚನ್ನಯ್ಯ ದೇವೂರ, ವೆಂಕಟೇಶ ಅರ್ಕಸಾಲಿ, ಎಂ.ಕೆ. ಲಮಾಣಿ, ಲಕ್ಷ್ಮಣ ಲಮಾಣಿ, ಪರಮೇಶ ಲಮಾಣಿ, ಟೋಪಣ್ಣ ಲಮಾಣಿ, ಥಾವರೆಪ್ಪ ಲಮಾಣಿ, ಪುಂಡಲೀಕ ಲಮಾಣಿ, ಸೋಮಣ್ಣ ಲಮಾಣಿ, ಈರಣ್ಣ ಚವ್ಹಾಣ, ಸೋಮರಡ್ಡಿ ಲಮಾಣಿ, ಶಿವು ಲಮಾಣಿ, ಕುಬೇರ ಲಮಾಣಿ, ಗಣೇಶ ನಾಯ್ಕ, ಸಂತೋಷ ರಾಠೋಡ ಮುಂತಾದವರು ಉಪಸ್ಥಿತರಿದ್ದರು.
ಯಾರೇ ಆದರೂ ಶಿರಹಟ್ಟಿ-ಲಕ್ಷ್ಮೇಶ್ವರ ತಾಲೂಕುಗಳನ್ನು ಒಡೆಯಲು ಸಾಧ್ಯವಿಲ್ಲ. ನನ್ನ ಸಮಾಜ ತಲೆ ತಗ್ಗಿಸುವ ಕೆಲಸ ನಾನು ಮಾಡುವುದಿಲ್ಲ. ಎಲ್ಲ ಸಮಾಜಗಳ ಗೌವ ಉಳಿಸುವ ಕೆಲಸ ಮಾಡುತ್ತೇನೆ. ನಿಮ್ಮ ಋಣ ತೀರಸಲು ಸಾಧ್ಯವಿಲ್ಲ. ಇತ್ತೀಚೆಗೆ ಸಮಾಜದ 10 ಪ್ರತಿಭಾವಂತ ವಿದ್ಯಾರ್ಥಿಗಳು ಎಂಬಿಬಿಎಸ್ಗೆ ಆಯ್ಕೆಯಾಗಿದ್ದಾರೆ. ವಿಶೇಷವಾಗಿ ಹರದಗಟ್ಟಿಯ ತಾಂಡಾದ ವಿದ್ಯಾರ್ಥಿನಿಯೊಬ್ಬಳು ತಂದೆ-ತಾಯಿ ಇಲ್ಲದಿದ್ದರೂ ಅಜ್ಜಿಯ ಆಶ್ರಯದಲ್ಲಿ ವಿದ್ಯಾಭ್ಯಾಸ ಮಾಡಿದ್ದು ಸಮಾಜದ ಗೌರವ ಹೆಚ್ಚಿಸಿದ್ದಾಳೆ. ಜೊತೆಗೆ 44 ಜನ ಸರಕಾರಿ ಸೇವೆ ಸೇರಿದ್ದಾರೆ. ಇದು ಹೆಮ್ಮೆಯ ವಿಷಯ ಎಂದು ಡಾ.ಚಂದ್ರು ಲಮಾಣಿ ಹೇಳಿದರು.