ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಗ್ರಾಮೀಣ ಭಾಗದ ಬಡ ಜನರಿಗೆ ಮಹಾನಗರಲ್ಲಿ ಸಿಗುವ ಉನ್ನತ, ಗುಣಮಟ್ಟದ ಶಿಕ್ಷಣ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ತಜ್ಞವೈದ್ಯರಿಂದ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಧ್ಯೇಯೋದ್ದೇಶದೊಂದಿಗೆ ಪ್ರಾರಂಭವಾದ ಅಗಡಿ ಸನ್ರೈಸ್ ಆಸ್ಪತ್ರೆ ಈ ಭಾಗದ ಜನರ ಆಶಾಕಿರಣವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಅಗಡಿ ಸನ್ರೈಸ್ ಆಸ್ಪತ್ರೆಯಲ್ಲಿ ಡಯಾಬಿಟಿಕ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಹುಬ್ಬಳ್ಳಿಯ ಹಿರಿಯ ಮಧುಮೇಹ ಮತ್ತು ಹೃದಯರೋಗ ತಜ್ಞರಾದ ಡಾ. ಜಿ.ಬಿ. ಸತ್ತೂರ ಮಾತನಾಡಿ, ಒತ್ತಡದ ಜೀವನ ಶೈಲಿ, ಆಹಾರದ ಮೇಲೆ ನಿಯಂತ್ರಣವಿಲ್ಲದಿರುವದು, ಯೋಗ, ವಾಕಿಂಗ್ ಬಗ್ಗೆ ನಿರಾಸಕ್ತಿ, ಬೊಜ್ಜು ಬೆಳೆಯುವದು ಇತ್ಯಾದಿಗಳು ಸಕ್ಕರೆ ರೋಗಕ್ಕೆ ಕಾರಣವಾಗಿವೆ. ನಿತ್ಯ ಆಹಾರದಲ್ಲಿ ಬಳಸುವ ಪದಾರ್ಥಗಳ ಮೇಲೆ ನಿಯಂತ್ರಣವಿರಲಿ. ಕಲಬೆರಕೆ ಆಹಾರ, ಮಿತಿಮೀರಿದ ಕರಿದ ಪದಾರ್ಥಗಳ ಸೇವನೆ, ಸಿಹಿ ಪದಾರ್ಥಗಳು, ಅನಿಯಮಿತ ಚಹಾ, ಕಾಫಿ ಸೇವನೆ ಇವುಗಳನ್ನು ನಿಯಂತ್ರಿಸಿ. ಮಧುಮೇಹ ಬಂದಾಗ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವದಕ್ಕೆ ಯೋಚಿಸಿ ಎಂದ ಅವರು, ಗ್ರಾಮೀಣ ಭಾಗದಲ್ಲಿನ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ದಿ.ವೆಂಕಪ್ಪ ಎಂ.ಅಗಡಿ ಅವರು ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದು ಇದೀಗ ಅತ್ಯಾಧುನಿಕ ಸಲಕರಣೆಗಳೊಂದಿಗೆ ಡಯಾಬಿಟಿಕ್ ಕೇಂದ್ರ ಪ್ರಾರಂಭಿಸಿರುವದಕ್ಕೆ ಜನರ ಪರವಾಗಿ ಸಂಸ್ಥೆಯ ಚೇರಮನ್ ಹರ್ಷವರ್ಧನ ಅಗಡಿ ಅವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ಇಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಪರಶುರಾಮ ಬಾರಕಿ, ಮುಖ್ಯ ಆಡಳಿತ ಅಧಿಕಾರಿ ಹಾಗೂ ಹೃದಯರೋಗ ತಜ್ಞ ಡಾ. ರಾಜಶೇಖರ ಮೂಲಿಮನಿ, ಆಯ್.ಎಂ.ಎ ಅಧ್ಯಕ್ಷ ಡಾ. ಪಿ.ಡಿ. ತೋಟದ, ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸುಜಾತಾ ಸಂಗೂರ, ಡಾ. ದೀಪಾ ರಾಯ್ಕರ್, ಡಾ. ರೇಷ್ಮಾ ರಾಥೋಡ ಉಪಸ್ಥಿತರಿದ್ದರು. ಸಹಾಯಕ ಆಡಳಿತ ಅಧಿಕಾರಿ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಸೋಮಶೇಖರ ಕೆರಿಮನಿ, ಮುತ್ತು ಬಿಂಕದಕಟ್ಟಿ, ಸುನಿತಾ, ಅಕ್ಷತಾ ನಿರೂಪಿಸಿದರು.
ಯಾವುದೇ ಖಾಯಿಲೆಗಳಿಗೆ ಔಷಧೋಪಚಾರದೊಂದಿಗೆ ಆರೋಗ್ಯ, ಶಿಕ್ಷಣದ ಅವಶ್ಯಕತೆಯಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಧುಮೇಹ ಕಾಯಿಲೆ ಹೆಚ್ಚುತ್ತಿದೆ. ಪ್ರಾರಂಭದ ಹಂತದಲ್ಲಿಯೇ ಅದನ್ನು ಮನಗಂಡು ಅಗತ್ಯ ಕ್ರಮಗಳೊಂದಿಗೆ ನಿಯಂತ್ರಣದಲ್ಲಿಟ್ಟುಕೊಂಡರೆ ಸ್ಥಿರ ಆರೋಗ್ಯ ಕಾಯಬಹುದು. ಮಧುಮೇಹಿಗಳಿಗೆ ಪೂರ್ಣ ಪ್ರಮಾಣದ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣದ ಅಗಡಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಘಟಕ ಪ್ರಾರಂಭಿಸಿರುವುದು ಉತ್ತಮ ಸಂಗತಿಯಾಗಿದೆ. ಹುಬ್ಬಳ್ಳಿ, ಗದಗ ಸೇರಿ ದೂರದ ನಗರಗಳಿಗೆ ಹೋಗುವ ಮಧುಮೇಹಿಗಳು ನಮ್ಮೂರ ಆಸ್ಪತ್ರೆಯಲ್ಲಿನ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.