ರಾಮನಗರ: ಕುಮಾರಸ್ವಾಮಿಗೆ ನೋಟು ಬಂದರೆ ನನಗೆ ವೋಟು ಬರಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈ ಬಾರಿ ಚನ್ನಪಟ್ಟಣ ಅಖಾಡದಲ್ಲಿ ಕುಮಾರಸ್ವಾಮಿಗೆ ನೋಟು ಬಂದರೆ ನನಗೆ ವೋಟು ಬರಲಿದೆ.
ಕುಮಾರಸ್ವಾಮಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕಾರಣ ಈ ಉಪಚುನಾವಣೆ ಬಂದಿದೆ. ಅನಿತಾ ಕುಮಾರಸ್ವಾಮಿ ಅವರು ಎರಡು ಸಲ ನನ್ನ ಮೇಲೆ ಸ್ಪರ್ಧೆ ಮಾಡಿದ್ದರು. ರಾಜನಿಗೆ ವಯಸ್ಸಾದ ಮೇಲೆ ಮಗನಿಗೆ ಪಟ್ಟಾಭಿಷೇಕ ಮಾಡುವ ಹಾಗೇ ಇದೀಗ ಮಗನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ ಎಂದರು.
ಕುಮಾರಸ್ವಾಮಿ ಶಾಸಕರಾಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಜೆಡಿಎಸ್ ಮುಖಂಡರನ್ನು ಪ್ರಶ್ನೆ ಮಾಡುತ್ತೇನೆ. ಕೆರೆಗಳಲ್ಲಿ ಬೆಳೆದಿರುವ ಗಿಡಗಳನ್ನು ಕೂಡ ಅವರ ಕೈಯಲ್ಲಿ ತೆಗಿಸಲು ಸಾಧ್ಯವಾಗಲಿಲ್ಲ. ಇನ್ನೂ ನಾನು ತಂದಿದ್ದ ನೀರಾವರಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲೇ ಇಲ್ಲ.
ಅವರ ಬಗ್ಗೆ ದೂರು ಹಾಕುತ್ತಿಲ್ಲ. ಅವರ ಕಾಲಾವಧಿಯಲ್ಲಿ ತಾಲೂಕು 8-10 ವರ್ಷ ಹಿಂದೆ ಬಿದ್ದಿದೆ. ಯಾವ ಮಾನದಂಡದ ಮೇಲೆ ಮಗನಿಗೆ ವೋಟ್ ಕೇಳೋಕೆ ಬರುತ್ತಿದ್ದಾರೆ ಎಂದು ಅವರೇ ಹೇಳಬೇಕು. ಅವರ ಮಗನಿಗೆ ವೋಟ್ ಕೇಳಲು ಜೆಡಿಎಸ್ ಮುಖಂಡರಿಗೆ ಯಾವ ನೈತಿಕತೆ ಇದೆ? ಎಂದು ಹೇಳಿದರು.