HomeDharwad`ನಡಿತೈತಿ ಬಿಡು’ ಎನ್ನುವುದಾದರೆ ಮನೆಗೆ ಹೋಗಿ: ಸಚಿವ ಸಂತೋಷ ಲಾಡ್

`ನಡಿತೈತಿ ಬಿಡು’ ಎನ್ನುವುದಾದರೆ ಮನೆಗೆ ಹೋಗಿ: ಸಚಿವ ಸಂತೋಷ ಲಾಡ್

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ನಮಗೆ, ನಿಮಗೆಲ್ಲರಿಗೂ ಇರುವ ಸಂಬಳ, ಸವಲತ್ತು ಸಾರ್ವಜನಿಕರಿಂದ ಬಂದಿದ್ದು. ನಮ್ಮ ನಮ್ಮ ಕೆಲಸ, ಕರ್ತವ್ಯಗಳನ್ನು ಮಾನವೀಯತೆ, ಆತ್ಮಸಾಕ್ಷಿಯಿಂದ ಮಾಡಬೇಕು. ವಿನಾಕಾರಣ ವಿಳಂಬ, ಉದ್ಯೋಗದಲ್ಲಿ ಆಲಸ್ಯ ತೋರಿಸುವ ಮತ್ತು `ನಡಿತೈತಿ ಬಿಡು’ ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಹೋಗಬಹುದು. ಜಿಲ್ಲೆಯ ಅಧಿಕಾರಿ, ನೌಕರರು ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅವರು ಸೋಮವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ 9ನೇ ಜನತಾ ದರ್ಶನದಲ್ಲಿ ಸಾರ್ವಜನಿಕರ, ಸಂಘ-ಸಂಸ್ಥೆಗಳ ದೂರು, ಅಹವಾಲುಗಳನ್ನು ಸ್ವೀಕರಿಸಿ, ನಂತರ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.

ಜನತಾ ದರ್ಶನದಲ್ಲಿ ಬರುವ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ಉತ್ತರಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಸಲ್ಲಿಕೆಯಾಗುವ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಬೇರೆ ಹಂತಕ್ಕೆ ಅರ್ಜಿ ರವಾನಿಸಬೇಕಾದಲ್ಲಿ ಅರ್ಜಿದಾರನಿಗೆ ಸೂಕ್ತ ತಿಳುವಳಿಕೆ ನೀಡಬೇಕು. ಆದರೆ ಸಂಬAಧಿಸಿದ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಕಳಕಳಿ, ಮಾನವೀಯತೆ ನೋಡದೆ ಯಾಂತ್ರಿಕವಾಗಿ ವರ್ತಿಸುತ್ತಿದ್ದಾರೆ ಎಂಬುದು ಸಲ್ಲಿಕೆ ಆಗುತ್ತಿರುವ ಅರ್ಜಿಗಳಿಂದ ತಿಳಿದುಬರುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಬರೀ ವೇತನಕ್ಕೆ ದುಡಿಯಬಾರದು. ಸರಕಾರದ ಸಂಬಳ ಪಡಿತೀವಿ, ಎಚ್ಚರವಿರಬೇಕು. ಜನತಾ ದರ್ಶನಕ್ಕೆ ಬರುವ ಬಹುತೇಕ ಸಮಸ್ಯೆ, ಅಹವಾಲುಗಳು ಅಧಿಕಾರಿಗಳ, ಸಿಬ್ಬಂದಿಗಳ ತಪ್ಪಿನಿಂದ ಆಗುತ್ತಿವೆ. ಸುಖಾಸುಮ್ಮನೆ ಜನರನ್ನು ಕಚೇರಿಗಳಿಗೆ ಅಲೆದಾಡಿಸಬೇಡಿ. ಕಡತಗಳ ವಿಲೇವಾರಿಯಲ್ಲಿ ವಿಳಂಬ ಮಾಡಬೇಡಿ. ನೌಕರಿಗೆ ಬಂದ ಮೇಲೆ ಅಧಿಕಾರಿಗಳಲ್ಲಿ ಒಂದು ಮೌಲ್ಯ, ಪ್ರೇರಣೆ, ಸೇವಾ ಮನೋಭಾವ ಇರಬೇಕು ಎಂದು ಸಚಿವ ಸಂತೋಷ ಲಾಡ್ ಅಧಿಕಾರಿಗಳಿಗೆ ನೈತಿಕ ಪಾಠ ಮಾಡಿದರು.

ಕೆಲವು ಅಹವಾಲುಗಳು ಜನತಾ ದರ್ಶನಕ್ಕೆ ಮತ್ತೇ ಮತ್ತೇ ಸಲ್ಲಿಕೆ ಆಗುತ್ತಿವೆ. ಇವುಗಳಿಗೆ ಬರೀ ಹಿಂಬರಹ ನೀಡಿ, ಹೊತ್ತು ಹಾಕಬೇಡಿ. ನಿಜವಾದ ಪರಿಹಾರ ಸೂಚಿಸಿ. ಸರಕಾರದ ನೀತಿಗೆ ಸಂಬAಧಿಸಿದ್ದರೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ. ಸರಕಾರಿ ಕರ್ತವ್ಯವನ್ನು ನಿಯಮಾನುಸಾರ ಮತ್ತು ಸಾರ್ವಜನಿಕ ಕಳಕಳಿಯಿಂದ ಮಾಡಿ ಎಂದು ಸಚಿವರು ತಿಳಿಸಿದರು.

ಸಭೆಗೆ ಗೈರಾಗಿದ್ದ ಕೆಲವು ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಇಂತಹ ಅಧಿಕಾರಿಗಳ ವಿರುದ್ಧ ಸಂಬಂಧಿಸಿದ ಇಲಾಖೆಗೆ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಸಚಿವರಿಗೆ ವಿವರಿಸಿ, ಪರಿಹಾರ ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜನತಾ ದರ್ಶನ ಕಾರ್ಯಕ್ರಮವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿಗಳ ಕಚೇರಿಯಿಂದಲೂ ಅಹವಾಲುಗಳ ಮಾನಿಟರಿಂಗ್ ಇರುತ್ತದೆ. ಅಧಿಕಾರಿಗಳು ಪ್ರೊಆ್ಯಕ್ಟಿವ್ ಆಗಿ ಕೆಲಸ ಮಾಡಬೇಕು. ಅರ್ಜಿ ಸರಿಯಾಗಿ ಪರಿಶೀಲನೆ ಮಾಡದೆ ಹಿಂಬರಹ ನೀಡುವ, ತಿರಸ್ಕರಿಸುವ ಅಧಿಕಾರಗಳ ನಡುವಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದರು.

ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ ವೇದಿಕೆಯಲ್ಲಿದ್ದರು. ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೇದಾರ ಮಲ್ಲಿಕಾರ್ಜುನ ಸೊಲಗಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಅಧಿಕಾರಿಯೇ ಹೊಣೆ

ಮುಂದಿನ ಜನತಾ ದರ್ಶನದಲ್ಲಿ ಯಾವುದೇ ಸಾರ್ವಜನಿಕ ದೂರು, ಅಹವಾಲು ಮರು ಸಲ್ಲಿಕೆಯಾದರೆ ಮತ್ತು ಅದನ್ನು ಸರಿಯಾಗಿ ನಿಯಮಾನುಸಾರ ಪರಿಶೀಲಿಸಿದೇ, ವಿಲೇವಾರಿ ಮಾಡಿದ್ದರೆ ಸಂಬಂಧಿಸಿದ ಅಧಿಕಾರಿಯನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಅಹವಾಲುಗಳು ಕಾಲಮಿತಿಯಲ್ಲಿ ವಿಲೇವಾರಿ ಆಗಬೇಕು. ತಪ್ಪಿದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸಂತೋಷ ಲಾಡ್ ಎಚ್ಚರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!