ಹಣ್ಣುಗಳ ರಾಜ ಮಾವಿನ ಹಣ್ಣು ಎಲ್ಲರಿಗೂ ಫೇವರಿಟ್. ಇದು ವರ್ಷದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಸಿಗುತ್ತದೆ. ಅಂದ್ರೆ ಬೇಸಿಗೆ ಕಾಲದಲ್ಲಿ. ಹಣ್ಣುಗಳ ರಾಜ ಎಂದೇ ಕರೆಯಲ್ಪಡುವ ಮಾವಿನ ಹಣ್ಣನ್ನು ಈ ಸಮಯದಲ್ಲಿ ಕೊಳ್ಳದವರೇ ಇಲ್ಲ ಸವಿಯದವರೇ ಇಲ್ಲ ಎನ್ನಬಹುದು. ತನ್ನಲ್ಲಿ ನೈಸರ್ಗಿಕವಾಗಿ ಸಿಗುವ ಅಪ್ರತಿಮ ರುಚಿಯನ್ನು ಹೊಂದಿರುವ, ಈ ಹಣ್ಣುಗಳನ್ನು ಮನೆಯಲ್ಲಿ ಹಿರಿಯರಿಂದ ಹಿಡಿದು, ಸಣ್ಣ ಮಕ್ಕಳವರೆಗೂ ಕೂಡ ಇಷ್ಟವಾಗುತ್ತದೆ.
ತಜ್ಞರು ಹೇಳುವ ಪ್ರಕಾರ, ಹಗಲಿನಲ್ಲಿ ಮಾವಿನಹಣ್ಣು ಸೇವಿಸುವುದರಿಂದ ಪ್ರಯೋಜನಕಾರಿಯಾಗಲಿದೆ, ಆದರೆ ರಾತ್ರಿಯಲ್ಲಿ ಈ ಹಣ್ಣನ್ನು ತಿನ್ನುವುದರಿಂದ ಹಲವಾರು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆಯಂತೆ.
ಊಟದ ಬಳಿಕ ಕೆಲವೊಂದು ಹಣ್ಣುಗಳನ್ನು ಸೇವನೆ ಮಾಡ ಬಾರದು ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಮಾವಿನ ಹಣ್ಣುಗಳು ಕೂಡ ಒಂದು. ಯಾಕಂದ್ರೆ ರಾತ್ರಿ ಸಮಯದಲ್ಲಿ ದೇಹದ ಜೀರ್ಣಕ್ರಿಯೆ ಪ್ರಕ್ರಿಯೆಯು ನಿಧಾನವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಾವಿನ ಹಣ್ಣನ್ನು ಸೇವನೆ ಮಾಡುವುದರಿಂದ, ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆಯಂತೆ. ಇದಕ್ಕೆ ಪ್ರಮುಖ ಕಾರಣ ಏನಂದ್ರೆ ಈ ಹಣ್ಣಿನಲ್ಲಿ ಕಂಡು ಬರುವ ಅಧಿಕ ಪ್ರಮಾಣದ ನಾರಿನಾಂಶದ ಜೊತೆಗೆ ನೈಸರ್ಗಿಕ ಸಿಹಿಯಾಂಶ, ಕ್ಯಾಲೋರಿ ಗಳು ಜೀರ್ಣಕ್ರಿಯೆ ಪ್ರಕ್ರಿಯೆಗಳ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ.
ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಇದೇ ಕಾರಣಕ್ಕೆ ಕೆಲವೊಮ್ಮೆ ಗ್ಯಾಸ್ಟ್ರಿಕ್, ಅಜೀರ್ಣ, ಹೊಟ್ಟೆ ನೋವು ಮತ್ತು ಹೊಟ್ಟೆಯುಬ್ಬ ರದಂತಹ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಮಾವಿನಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಅಧಿಕವಾಗಿದೆ. ಹೀಗಾಗಿ ರಾತ್ರಿ ಮಲಗುವ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆಮಟ್ಟ ಹಠಾತ್ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗಾಗಿ ಈಗಾಗಲೇ ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಈ ಹಣ್ಣಿನಿಂದ ದೂರವಿದ್ದರೆ ಒಳ್ಳೆಯದು.
ಮಾವಿನಹಣ್ಣಿನಲ್ಲಿ ಕ್ಯಾಲೋರಿ ಮತ್ತು ನೈಸರ್ಗಿಕ ಸಕ್ಕರೆಯಾಂಶ ಎರಡೂ ಕೂಡ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಹೀಗಾಗಿ ರಾತ್ರಿ ಸಮಯದಲ್ಲಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ದೇಹವು ಕ್ಯಾಲೊರಿಗಳನ್ನು ಸುಡಲು ಸಾಕಷ್ಟು ಸಮಯವನ್ನು ಒದಗಿಸುವುದಿಲ್ಲ, ಯಾಕೆಂದ್ರೆ ರಾತ್ರಿಯ ಸಮಯದಲ್ಲಿ ದೈಹಿಕ ಚಟುವಟಿಕೆಯನ್ನು ಮಾಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗ ಬಹುದು ಮತ್ತು ತೂಕವನ್ನು ಹೆಚ್ಚಿಸಬಹುದು.
ರಾತ್ರಿಯ ಸಮಯದಲ್ಲಿ ಮಾವಿನ ಹಣ್ಣು ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ, ಇದರಿಂದಾಗಿ ದೇಹವು ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ಮಲಗುವ ಮುನ್ನ ಮಾವು ತಿಂದರೆ ಅದು ನಿದ್ರೆಗೆ ಅಡ್ಡಿಯಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನಿದ್ರೆಯ ಗುಣಮಟ್ಟವೂ ಕೂಡ ದಿನಾ ಹೋದ ಹಾಗೆ ಕಡಿಮೆ ಆಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.