ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣವು ಜ. ಕರ್ತೃ ಶ್ರೀ ಫಕೀರೇಶ್ವರರ ತಪೋಭೂಮಿಯಾಗಿದ್ದು, ಇಡೀ ಜಗತ್ತಿಗೆ ದ್ವೇಷ ಮಾಡಿದರೆ ನರಕ, ಪ್ರೀತಿ ಮಾಡಿದರೆ ಸ್ವರ್ಗ ಎನ್ನುವ ದಿವ್ಯ ಸಂದೇಶವನ್ನು ನೀಡಿದೆ. ಇದನ್ನು ನಾವೆಲ್ಲರೂ ತಿಳಿದುಕೊಳ್ಳುವುದು ಅವಶ್ಯವಿದೆ ಎಂದು ಶಿರಹಟ್ಟಿಯ ಜ. ಫ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯ ಜ. ಫಕೀರೇಶ್ವರ ಮಠದಲ್ಲಿ ಶಿರಹಟ್ಟಿ ಪೋಲೀಸ್ ಠಾಣಾ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗದಗ ಡಿಎಸ್ಪಿ ಮುರ್ತುಜಾ ಖಾದ್ರಿ ಮಾತನಾಡಿ, ಶಿರಹಟ್ಟಿ ಪಟ್ಟಣವು ಶಾಂತಿಯ ಬೀಡಾಗಿದ್ದು, ನಾವು ಇಲ್ಲಿ ಸೇವೆ ಸಲ್ಲಿಸಲು ಬಂದ ಸಮಯದಲ್ಲಿ ಇದನ್ನು ನಾವು ನಮ್ಮ ಊರೆಂದು ಭಾವಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಶ್ರಮಿಸುತ್ತೇವೆ. ಇಲ್ಲಿ ಹುಟ್ಟಿ ಬೆಳೆದಿರುವ ತಾವೆಲ್ಲರೂ ಇದರ ಬಗ್ಗೆ ಇನ್ನೂ ಹೆಚ್ಚು ಕಾಳಜಿಯನ್ನು ವಹಿಸಿ ಶಾಂತಿ ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಇಲ್ಲಿ ಅನೇಕ ಹಿರಿಯರಿದ್ದು, ಯುವಪೀಳಿಗೆ ದಾರಿ ತಪ್ಪದಂತೆ ನೋಡಿಕೊಳ್ಳಬೇಕು. ಸಮಸ್ಯೆಗಳು ಬಂದಾಗ ಸಮಸ್ಯೆಯನ್ನು ಮಾತ್ರ ಪರಿಹರಿಸಬೇಕೇ ಹೊರತು ವ್ಯಕ್ತಿ-ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳಬಾರದು ಎಂದರು.
ತಹಸೀಲ್ದಾರ ರಾಘವೇಂದ್ರರಾವ್ ಕೆ., ಸಿಪಿಐ ಬಿ. ವಿ. ನ್ಯಾಮಗೌಡ, ಪಿಎಸ್ಐ ಈರಪ್ಪ ರಿತ್ತಿ ಮಾತನಾಡಿದರು. ಮೂವರು ಅಧಿಕಾರಿಗಳನ್ನು ಜ. ಫ. ಸಿದ್ದರಾಮ ಸ್ವಾಮೀಜಿ ಸನ್ಮಾನಿಸಿದರು.
ಹುಮಾಯೂನ್ ಡಿ. ಮಾಗಡಿ, ಸಿ. ಸಿ. ನೂರಶೆಟ್ಟರ, ನಾಗರಾಜ ಲಕ್ಕುಂಡಿ, ಹೊನ್ನಪ್ಪ ಶಿರಹಟ್ಟಿ, ಎಂ. ಕೆ. ಲಮಾಣಿ, ರವಿ ಗುಡಿಮನಿ, ಸಂದೀಪ ಕಪ್ಪತ್ತನವರ, ಪರಮೇಶ ಪರಬ, ಮಂಜುನಾಥ ಘಂಟಿ, ಫಕ್ಕೀರೇಶ ರಟ್ಟಿಹಳ್ಳಿ, ಅಜ್ಜು ಪಾಟೀಲ, ಚಾಂದಸಾಬ ಮುಳಗುಂದ, ಮುತ್ತುರಾಜ ಭಾವಿಮನಿ, ಸೋಮನಗೌಡ ಮರಿಗೌಡರ, ಈರಣ್ಣ ಕೋಟಿ, ಇಸಾಕ್ ಆದ್ರಳ್ಳಿ, ಅಶ್ರಫ್ ಅಲಿ ಢಾಲಾಯತ್ ಮುಂತಾದವರು ಉಪಸ್ಥಿತರಿದ್ದರು.
ಮಸೀದಿ ಬೇರೆಯಲ್ಲ, ಮಂದಿರ ಬೇರೆಯಲ್ಲ. ಎಲ್ಲವೂ ಒಂದೇ ಎನ್ನುವ ಮನೋಭಾವನೆಯನ್ನು ಹೊಂದಬೇಕು. ಎಲ್ಲರೊಂದಿಗೂ ಭ್ರಾತೃತ್ವವನ್ನು ಹೊಂದಬೇಕು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕಲ್ಪಿಸಬೇಡಿ. ಇತರರಿಗೆ ಮಾದರಿಯಾದ ಶಿರಹಟ್ಟಿ ಪಟ್ಟಣದಲ್ಲಿ ಮುಂಬರುವ ದಿನಗಳಲ್ಲೂ ಸಹ ಶಾಂತಿ ನೆಲೆಸುವಂತೆ ಎಲ್ಲರೂ ಶ್ರಮಿಸಬೇಕೆಂದು ಶ್ರೀಗಳು ಹೇಳಿದರು.


